ಸಕಲೇಶಪುರ: ತಾಲ್ಲೂಕಿನ ಸುಳ್ಳಕ್ಕಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಭತ್ತದ ಗದ್ದೆಗೆ ಹೋಗುತ್ತಿದ್ದ ರೈತ ಮಂಜುನಾಥ್ (52) ಮೇಲೆ ಕಾಡಾನೆ ದಾಳಿ ನಡೆಸಿದ್ದು, ರೈತ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಶನಿವಾರ ಕಾಡಾನೆ ದಾಳಿಯಿಂದ ವೃದ್ಧರೊಬ್ಬರು ಮೃತಪಟ್ಟಿದ್ದರು. ಇದೀಗ ಮತ್ತೊಂದು ಘಟನೆ ನಡೆದಿದೆ. ನಿರಂತರ ಆನೆ ದಾಳಿಯಿಂದ ಜೀವ ಹಾನಿ ಖಂಡಿಸಿ ವಿವಿಧ ಸಂಘಟನೆಗಳು ಸಕಲೇಶಪುರದಲ್ಲಿ ಅಂಗಡಿ ಮುಂಗಟ್ಟುಗಳ ಬಾಗಿಲು ಬಂದ್ ಮಾಡಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದವು.
ಮೊದಲೇ ಅತಿವೃಷ್ಟಿಯಿಂದ ತತ್ತರಿಸಿದ್ದೇವೆ. ಕಾಡಾನೆ ದಾಳಿಯಿಂದ ಮನೆಯಿಂದ ಹೊರಗೆ ಬರದ ಸ್ಥಿತಿ ನಿರ್ಮಾಣವಾಗಿದೆ. ಕಾಡಾನೆ ಉಪಟಳದಿಂದ ಶಾಶ್ವತ ಮುಕ್ತಿ ಕೊಡಿಸಬೇಕು ಎಂದು ಆಗ್ರಹಿಸಿದರು.