ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಶಾಲನಗರ | ಜಾಗದ ಕೊರತೆ; ನೀಗದ ಕಸದ ಸಮಸ್ಯೆ

Published 9 ಫೆಬ್ರುವರಿ 2024, 6:12 IST
Last Updated 9 ಫೆಬ್ರುವರಿ 2024, 6:12 IST
ಅಕ್ಷರ ಗಾತ್ರ

ಕುಶಾಲನಗರ: ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಗ್ರಾಮಗಳಲ್ಲೂ ಕಸದ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಜನರ ಜೀವ ಹಿಂಡುತ್ತಿದೆ. ಇದರ ಪರಿಹಾರಕ್ಕೆ ಜನಪ‍್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಹೆಚ್ಚಿನ ಗಮನಹರಿಸಿಲ್ಲ. ಇದರಿಂದ ದಿನೇ ದಿನೇ ಈ ಭಾಗದಲ್ಲಿ ತ್ಯಾಜ್ಯದ ಸಮಸ್ಯೆ ಬಿಗಡಾಯಿಸುತ್ತಿದೆ.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿತ್ಯ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡಲು ಜಾಗದ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಬ್ಯಾಡಗೊಟ್ಟದಲ್ಲಿ ಜಾಗ ಪರಿಶೀಲಿಸಿ
ನೂತನ ಕಸ ವಿಲೇವಾರಿ ಘಟಕ ಸ್ಥಾಪನೆಗೆ ₹ 5 ಲಕ್ಷ ಮಂಜೂರು ಮಾಡಿದ್ದರು. ಆದರೆ, ಬ್ಯಾಡಗೊಟ್ಟ ನಿವಾಸಿಗಳು ಕಸವಿಲೇವಾರಿ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಘಟಕ ಸ್ಥಾಪನೆಯ ಸಮಸ್ಯೆ ಬಗಹರಿದಿಲ್ಲ.

ಜೊತೆಗೆ, ಈಗ ನಿತ್ಯ ಸಂಗ್ರಹವಾಗುವ ಕಸವನ್ನು ಕುಶಾಲನಗರ ಪುರಸಭೆಯ ಕಸ ವಿಲೇವಾರಿ ಜಾಗದಲ್ಲಿಯೇ ಹಾಕಲಾಗುತ್ತಿದೆ. ಇಲ್ಲಿನ ವಾತಾವರಣ ತೀರಾ ಹದಗೆಟ್ಟಿದೆ. ಇಂತಹ ಕೆಟ್ಟ ವಾತಾವರಣದಲ್ಲಿ ಕೃಷಿಕರು ಬದುಕು ನಡೆಸುವ ಅನಿವಾರ್ಯತೆ ಉಂಟಾಗಿದೆ. ಗ್ರಾಮಸ್ಥರ ಮನೆಗಳ ಹತ್ತಿರದಲ್ಲಿಯೇ ಈ ತ್ಯಾಜ್ಯ ಘಟಕ ಇರುವುದರಿಂದ ಕೆಲವು ಜನರು ರೋಗ ರುಜಿನಗಳಿಗೆ ತುತ್ತಾಗಿದ್ದಾರೆ.

ಭುವನಗಿರಿ, ಕಣಿವೆ ಗ್ರಾಮಸ್ಥರು ಕೂಡಿಗೆ ಗ್ರಾಮ ಪಂಚಾಯಿತಿಗೆ ಅನೇಕ ಬಾರಿ ಮನವಿ ಸಲ್ಲಿಸುತ್ತಾ ಬಂದಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲು ತೊಡಿಕೊಂಡಿದ್ದಾರೆ.

ಹೆಬ್ಬಾಲೆ ರಸ್ತೆ ಬದಿಯಲ್ಲಿ ಕಸವಿಲೇವಾರಿ

ಹೆಬ್ಬಾಲೆ ಗ್ರಾಮದಲ್ಲಿ ನಿತ್ಯ ಸಂಗ್ರಹವಾಗುವ ಕಸವನ್ನು ಹೆಬ್ಬಾಲೆಯಿಂದ ಬಾಣಾವಾರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿಯೇ ಕಸವಿಲೇವಾರಿ ಮಾಡಲಾಗುತ್ತಿದೆ. ಹೆಬ್ಬಾಲೆ ಗ್ರಾಮದಲ್ಲಿ ಪೈಸಾರಿ ಹಾಗೂ ಸರ್ಕಾರಿ ಜಾಗ ಬಹುತೇಕ ಕಡೆ ಇದ್ದರೂ ಕೂಡ ರಸ್ತೆ ಬದಿಯಲ್ಲಿ ಕಸವಿಲೇವಾರಿ ಮಾಡುತ್ತಿರುವ ಕ್ರಮಕ್ಕೆ ವಿರೋಧ ಕೂಡ ವ್ಯಕ್ತವಾಗಿದೆ. ಅಲ್ಲದೇ, ಕಸವಿಲೇವಾರಿ ಮಾಡುವ ಅಕ್ಕಪಕ್ಕದ ಬೆಟ್ಟಗುಡ್ಡವನ್ನು ಗ್ರಾಮದ‌ ಕೆಲವು ವ್ಯಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಬೇಲಿ ನಿರ್ಮಿಸಿಕೊಂಡಿದ್ದರೂ, ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಮುಳ್ಳುಸೋಗೆ ಕಸವಿಲೇವಾರಿ ಸೂಕ್ತ ಜಾಗ 

ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನನಿತ್ಯ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡಲು ಸೂಕ್ತ ಜಾಗದ ಕೊರತೆಯಿಂದ ಈ ಹಿಂದೆ ಕಾವೇರಿ ನದಿ ದಂಡೆಯಲ್ಲಿಯೇ ಕಸವನ್ನು ಹಾಕುತ್ತಿದ್ದರು. ಇದೀಗ ಪಂಚಾಯತಿ ವತಿಯಿಂದ ಹಾರಂಗಿ ರಸ್ತೆಯ ಸಮೀಪ ಸೂಕ್ತ ಜಾಗವನ್ನು ಗುರುತು ಮಾಡಿ ಅಲ್ಲಿಯೇ ಕಸವಿಲೇವಾರಿ ವ್ಯವಸ್ಥೆ ಮಾಡಲಾಗಿದೆ.

ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಸಾವಿರ ಜನಸಂಖ್ಯೆ ಇದೆ. ವಿವಿಧ ಬಡಾವಣೆಗಳಲ್ಲಿ ನಿತ್ಯ ಮೂರರಿಂದ, ನಾಲ್ಕು ಟ್ರ್ಯಾಕ್ಟರ್‌ಗಳಷ್ಟು ಕಸ ಸಂಗ್ರಹವಾಗುತ್ತಿದೆ.

ಗುಡ್ಡೆಹೊಸೂರು ಗ್ರಾಮ ಪಂಚಾಯತಿ ವತಿಯಿಂದ ಬಸವನಹಳ್ಳಿ ಬಳಿ ಅರ್ಧ ಎಕರೆ ಜಾಗದಲ್ಲಿ‌ ಕಸವಿಲೇವಾರಿ ಘಟಕ ಆರಂಭಿಸಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿತ್ಯ ಸಂಗ್ರಹವಾಗುವ ಕಸವನ್ನು ಅಲ್ಲಿಯೇ ಹಾಕಲಾಗುತ್ತಿದ್ದಾರೆ. ಆದರೆ, ಅಕ್ಕಪಕ್ಕದ ನಿವಾಸಿಗಳು ಕಲಸ ವಿಲೇವಾರಿ ಘಟಕವನ್ನು ಬೇರೆಗೆ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಸಮೀಪ ಬಾಣಾವರ ರಸ್ತೆಬದಿಯಲ್ಲಿ ರಾಶಿ ಹಾಕಲಾಗಿರುವ ಕಸ
ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಸಮೀಪ ಬಾಣಾವರ ರಸ್ತೆಬದಿಯಲ್ಲಿ ರಾಶಿ ಹಾಕಲಾಗಿರುವ ಕಸ

ಮುಂಚೆ ಮನೆ ಇರಲಿಲ್ಲ ಈಗ ಮನೆಯಾಗಿದೆ; ಪಿಡಿಒ

ಗುಡ್ಡೆಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನಹಳ್ಳಿ ಬಳಿ ಅರ್ಧ ಎಕರೆ ಜಾಗದಲ್ಲಿ ಕಸವಿಲೇವಾರಿ ಘಟಕ ಸ್ಥಾಪಿಸಲಾಗಿದೆ. ಪಂಚಾಯತಿ ವ್ಯಾಪ್ತಿಯಲ್ಲಿ ದಿನ ನಿತ್ಯ ಸಂಗ್ರಹವಾಗುವ ಕಸವನ್ನು ಇದೇ ಜಾಗದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಈ ಹಿಂದೆ ಪ್ರದೇಶದಲ್ಲಿ ಯಾವುದೇ ವಸತಿ ಮನೆಗಳು ಇರಲಿಲ್ಲ. ಆದರೆ ಈಗ ಘಟಕ ಬಳಿ ಕೆಲವು ವಾಸದ‌ಮನೆಗಳು ಆಗಿವೆ. ಜೊತೆಗೆ ನಿವೇಶನಗಳನ್ನು ಮಾಡಿ ವಸತಿ ರಹಿತರಿಗೆ ಹಂಚಲಾಗುತ್ತಿದೆ. ಇಲ್ಲಿ ನೆಲಸಿರುವ ಜನರು ಕಸವಿಲೇವಾರಿ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಸುಮೇಶ್ ಗುಡ್ಡೆಹೊಸೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ

‘ವಿರೋಧದಿಂದ ಘಟಕ ಸ್ಥಾಪನೆಯಾಗಿಲ್ಲ’

ಕೂಡಿಗೆ ಗ್ರಾಮ ಪಂಚಾಯಿತಿಯಲ್ಲಿ ಕಸವಿಲೇವಾರಿ ಘಟಕ ಆರಂಭಿಸಲು ಜಾಗದ ಕೊರತೆ ಇದೆ. ಈ ಹಿಂದೆ ಜಿಲ್ಲಾ ಪಂಚಾಯಿತಿ ವತಿಯಿಂದ ₹ 5 ಲಕ್ಷ ಕಸ ವಿಲೇವಾರಿ ಘಟಕ ಸ್ಥಾಪಿಸಲು ಮಂಜೂರಾಗಿತ್ತು. ಬ್ಯಾಡಗೊಟ್ಟ ಬಳಿ ಜಾಗ ಕೂಡ ಗುರುತಿಸಲಾಗಿತ್ತು. ಆದರೆ ಬ್ಯಾಡಗೊಟ್ಟ ನಿವಾಸಿಗಳು ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಪರಿಣಾಮ ಘಟಕ ಸ್ಥಾಪನೆ ಸಾಧ್ಯವಾಗಿಲ್ಲ. ಮಂಜುಳಾ ಕೂಡಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT