ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲದ ಕುಮಟೂರುವಿನ ತೋಟವೊಂದರ ಕೆರೆಯಲ್ಲಿ ಸಿಲುಕಿದ್ದ ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ರಕ್ಷಿಸಿದರು.
ಮಂಗಳವಾರ ರಾತ್ರಿ ಕಾಡಾನೆಗಳ ಹಿಂಡು ಕೆರೆಗೆ ಇಳಿದಿತ್ತು. ನೀರು ಕುಡಿದ ನಂತರ ಕೆಲವು ಆನೆಗಳು ಹೊರ ಬಂದಿದ್ದವು. ಆದರೆ, 4 ಆನೆಗಳು ಹೊರ ಬರಲಾಗದೇ ಸಿಲುಕಿಕೊಂಡಿದ್ದವು.
ಸ್ಥಳೀಯರಿಂದ ಮಾಹಿತಿ ದೊರೆತ ಬಳಿಕ ಬಂದ ಅರಣ್ಯ ಸಿಬ್ಬಂದಿ ಜೆಸಿಬಿ ಮೂಲಕ ಕೆರೆಯ ಒಂದು ಬದಿಯ ಮಣ್ಣನ್ನು ತೆಗೆದು ಆನೆಗಳು ಮೇಲೆ ಹತ್ತಲು ಸಾಧ್ಯವಾಗುವಂತೆ ದಾರಿ ಮಾಡಿಕೊಟ್ಟರು. ಬಳಿಕ ಎಲ್ಲ ಆನೆಗಳೂ ಹೊರ ಬಂದವು.
ಈ ಕುರಿತು ‘ಪ್ರಜಾವಾಣಿ’ ಪ್ರತಿಕ್ರಿಯಿಸಿದ ಡಿಸಿಎಫ್ ಜಗನ್ನಾಥ್, ‘ಮಳೆ ಬಂದಿದ್ದರಿಂದ ಮಣ್ಣು ಜಾರುತ್ತಿತ್ತು. ಎಷ್ಟೇ ಪ್ರಯತ್ನಪಟ್ಟರೂ ಆನೆಗಳು ಹೊರಬರಲಾಗದೇ ಪರದಾಡುತ್ತಿದ್ದವು. ವಿಷಯ ತಿಳಿದ ತಕ್ಷಣ ಸಿಬ್ಬಂದಿ ಸ್ಥಳಕ್ಕೆ ತೆರಳಿ ಎಲ್ಲ ಕಾಡಾನೆಗಳನ್ನೂ ರಕ್ಷಿಸಿದರು’ ಎಂದು ತಿಳಿಸಿದರು.
ಹೆದ್ದಾರಿಯಲ್ಲಿ ಸಂಚರಿಸಿದ ಕಾಡಾನೆ: ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆಯ ಮಂಗಳೂರು– ಮೈಸೂರು ಹೆದ್ದಾರಿಯಲ್ಲಿ ಕಾಡಾನೆಯೊಂದು ಬುಧವಾರ ಬೆಳಿಗ್ಗೆ ಸಂಚರಿಸಿ ವಾಹನ ಸವಾರರಲ್ಲಿ ಭೀತಿ ಸೃಷ್ಟಿಸಿತ್ತು. ಯಾರಿಗೂ ಅಪಾಯ ಮಾಡದ ತೋಟವೊಂದರ ಬಾಗಿಲು ತೆರೆದು ಪ್ರವೇಶಿಸಿತು.