ಮಡಿಕೇರಿ: ಇಲ್ಲಿನ ರೆಡ್ಕ್ರಾಸ್ ಸಂಸ್ಥೆಯ ಸಮೀಪದ ನಿರ್ಮಾಣ ಹಂತದ ಕಾಮಗಾರಿ ವೇಳೆ ಮಂಗಳವಾರ ಸಂಜೆ ಮಣ್ಣು ಕುಸಿದು ಮಣ್ಣಿನಡಿ ಸಿಲುಕಿದ್ದ ಮೂವರು ಕಾರ್ಮಿಕರೂ ಮೃತಪಟ್ಟಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದೆ. ಬಸವರಾಜು, ಆನಂದ, ನಿಂಗಪ್ಪ ಮೃತಪಟ್ಟವರು.
ಕಟ್ಟಡ ನಿರ್ಮಿಸಲು ತಡೆಗೋಡೆ ಕಟ್ಟುವ ವೇಳೆ ಮಂಗಳವಾರ ಸಂಜೆ 5.45ರ ವೇಳೆಯಲ್ಲಿ ನಾಲ್ವರು ಕಾರ್ಮಿಕರ ಮೇಲೆ ಮಣ್ಣು ಕುಸಿದಿದೆ. ಅವರಲ್ಲಿ ಒಬ್ಬರನ್ನು ಕೂಡಲೇ ಸ್ಥಳದಲ್ಲಿದ್ದ ಇತರೆ ಕಾರ್ಮಿಕರ ಹೊರಗೆಳೆದು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಬಸವರಾಜು, ಆನಂದ, ನಿಂಗಪ್ಪ ಎಂಬ ಕಾರ್ಮಿಕರು ಮಣ್ಣಿನಡಿ ಸಿಲುಕಿದರು.
ಸ್ಥಳಕ್ಕೆ ಬಂದ ಅಗ್ನಿಶಾಮಕ ಪಡೆ ಮಣ್ಣು ತೆರವುಗೊಳಿಸುವ ವೇಳೆಗೆ ಈ ಮೂವರ ಮೃತದೇಹಗಳು ಪತ್ತೆಯಾದವು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಮನ್, ಶಾಸಕ ಡಾ.ಮಂತರ್ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.