ಕುಶಾಲನಗರ/ ಸೋಮವಾರಪೇಟೆ: ಸಮೀಪದ ತೊರೆನೂರು ಪಂಚಾಯಿತಿ ವ್ಯಾಪ್ತಿಯ ಅಳಿಲುಗುಪ್ಪೆ ಗ್ರಾಮದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ₹83 ಸಾವಿರ ಮೌಲ್ಯದ ಶ್ರೀಗಂಧದ ತುಂಡುಗಳನ್ನು ಸೋಮವಾರಪೇಟೆ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಗುರುವಾರ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಗ್ರಾಮದ ಎ.ಕೆ.ಪ್ರಸನ್ನ ಬಂಧಿತ ವ್ಯಕ್ತಿ.
ಸಿಐಡಿ ಅರಣ್ಯ ಘಟಕದ ಮಡಿಕೇರಿ ಎಸ್ಪಿ ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ ಅರಣ್ಯ ಸಂಚಾರಿ ದಳದ ಪಿಎಸ್ಐ ಎಂ.ಡಿ.ಅಪ್ಪಾಜಿ ಹಾಗೂ ಸಿಬ್ಬಂದಿ ಖಚಿತ ಮಾಹಿತಿ ಆಧರಿಸಿ ಅಳಿಲುಗುಪ್ಪೆ ಪ್ರಸನ್ನ ಅವರ ಮನೆ ಮೇಲೆ ದಾಳಿ ಮಾಡಿದಾಗ ಅಕ್ರಮವಾಗಿ ಸಂಗ್ರಹಿಸಿದ್ದ 21 ಕೆ.ಜಿ ಶ್ರೀಗಂಧದ ತುಂಡುಗಳು ಸಿಕ್ಕಿವೆ.
ಆರೋಪಿ ಬಂಧಿಸಿ, ಮುಂದಿನ ತನಿಖೆಗಾಗಿ ವಲಯ ಅರಣ್ಯಾಧಿಕಾರಿ ಕಚೇರಿಗೆ ಕರೆದೊಯ್ಯಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಗಳಾದ ಕೆ.ಎಸ್.ಚಂಗಪ್ಪ, ಎಸ್.ಆರ್.ರಮೇಶ್, ರಾಘವೇಂದ್ರ, ಚಾಲಕ ಎಸ್.ಎಂ.ಗಣೇಶ್ ಪಾಲ್ಗೊಂಡಿದ್ದರು.