ಮಡಿಕೇರಿ: ‘ಭಾರತೀಯ ಸೇನೆ ಮಹತ್ವವನ್ನು ಪೋಷಕರು ತಮ್ಮ ಮಕ್ಕಳಿಗೆ ತಿಳಿಸಬೇಕು. ಆ ಮೂಲಕ ಸೇನೆಗೆ ಸೇರಿಸಲು ಉತ್ತೇಜನ ನೀಡಬೇಕು’ ಎಂದು ನಿವೃತ್ತ ಮೇಜರ್ ಜನರಲ್ ಕಾಳೆಂಗಡ ಸಿ. ಕಾರ್ಯಪ್ಪ ಕರೆ ನೀಡಿದರು.
ಮಡಿಕೇರಿ ರೋಟರಿ ಕ್ಲನ್ 67ನೇ ಅಧ್ಯಕ್ಷ ಕಿರಿಯಮಾಡ ರತನ್ ತಮ್ಮಯ್ಯ ಮತ್ತು ಕಾರ್ಯದರ್ಶಿ ಕಾಂಡಂಡ ಕಾರ್ಯಪ್ಪ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪ್ರತಿ ಪೋಷಕರೂ ತಮ್ಮ ಮಕ್ಕಳನ್ನು ಸೇನಾ ಪಡೆಗೆ ಸೇರ್ಪಡೆಗೊಳಿಸುವಲ್ಲಿ ಚಿಕ್ಕಂದಿನಿಂದಲೇ ಮಕ್ಕಳ ಮನಸ್ಸಿನಲ್ಲಿ ಸೇನಾಪಡೆ ವೃತ್ತಿಯ ಮಹತ್ವದ ಬಗ್ಗೆ ತಿಳಿವಳಿಕೆ ಮೂಡಿಸಬೇಕು’ ಎಂದು ಕರೆ ನೀಡಿದರು.
‘ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಭಾರತೀಯ ಸೈನಿಕರು ಭಾರತದ ಜನರ ಸಂರಕ್ಷಣೆಗೆ ಮುಂದಾಗುತ್ತಾರೆ. ಹಲವು ವರ್ಷಗಳ ಮೊದಲೇ ಭಾರತೀಯ ಸೇನೆ ಗ್ರಾಮೀಣ ಪ್ರದೇಶಗಳಲ್ಲಿ ಹಸಿರೀಕರಣದಂಥ ಯೋಜನೆ ಜಾರಿಗೊಳಿಸಿ ಜನರ ಮನ ಗೆದ್ದಿತ್ತು’ ಎಂದು ಹೇಳಿದರು.
ಬೆಂಗಳೂರಿನ ಡೊಗ್ರ ರೆಜಿಮೆಂಟ್, ಕೊಡಗು ಹಾಗೂ ಕೇರಳ ಸೇರಿದಂತೆ ಪ್ರಕೃತ್ತಿ ವಿಕೋಪ ಪ್ರದೇಶಗಳಲ್ಲಿ ನಾಗರಿಕರನ್ನು ಸುರಕ್ಷಿತವಾಗಿ ರಕ್ಷಿಸಿತ್ತು. ಇಂತಹ ಕಾರ್ಯಗಳಿಂದ ಭಾರತೀಯ ಸೇನೆ ಜನಸ್ನೇಹಿಯಾಗಿದೆ ಎಂದು ಹೇಳಿದರು.
ರೋಟರಿ ಸಂಸ್ಥೆಗೆ ಸಮಾಜಸೇವಾ ಮನೋಭಾವದ ತುಡಿತವಿದ್ದು, ಹೀಗಾಗಿಯೇ ರೋಟರಿ ಸದಸ್ಯರು ಇತರರಿಂತ ಭಿನ್ನವಾಗಿ ಚಿಂತಿಸಬಲ್ಲವರು ಎಂದು ಶ್ಲಾಘಿಸಿದರು.
ಮಡಿಕೇರಿ ರೋಟರಿಯ ನೂತನ ತಂಡಕ್ಕೆ ಅಧಿಕಾರ ಪದಗ್ರಹಣ ನೆರವೇರಿಸಿದ ನಾಮಾಂಕಿತ ಗವರ್ನರ್ ರವೀಂದ್ರ ಭಟ್ ಮಾತನಾಡಿ, ಸಮಾಜಸೇವಾ ಮನೋಧರ್ಮದ ಎಲ್ಲರನ್ನೂ ರೋಟರಿ ಸಂಸ್ಥೆಯು ಒಂದೇ ವೇದಿಕೆ ಅಡಿ ಒಗ್ಗೂಡಿಸುತ್ತದೆ ಎಂದು ಹೇಳಿದರು.
ರೋಟರಿ ವಲಯ 6ರ ಸಹಾಯಕ ಗವರ್ನರ್ ಪಿ.ನಾಗೇಶ್ ಮಾತನಾಡಿ, ಈ ಬಾರಿ ರೋಟರಿ ವತಿಯಿಂದ ‘ಜೀವನ್ ಸಂಧ್ಯಾ’ ಎಂಬ ಹಿರಿಯ ನಾಗರಿಕರಿಗಾಗಿನ ಯೋಜನೆ ಮತ್ತು ಸೇವ್–ಎ–ಲೈಫ್ ಎಂಬ ತುರ್ತು ಚಿಕಿತ್ಸೆಯ ಯೋಜನೆ ಜಾರಿಗೊಳಿಸಿದೆ. ರೋಟರಿ ಸದಸ್ಯರು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿ ಸಮಾಜಕ್ಕೆ ಅಗತ್ಯ ನೆರವು ನೀಡಬೇಕು ಎಂದು ಕೋರಿದರು.
ರೋಟರಿಯ ವಲಯ ಕಾರ್ಯದರ್ಶಿ ಅನಿಲ್ ಎಚ್.ಟಿ. ಮಾತನಾಡಿ, 67 ವಷ೯ಗಳ ಇತಿಹಾಸದಿಂದ ಪ್ರತಿಷ್ಠಿತ ರೋಟರಿ ಸಂಸ್ಥೆಯಾಗಿರುವ ಮಡಿಕೇರಿ ರೋಟರಿ 3 ಜಿಲ್ಲಾ ಗವರ್ನರ್ಗಳನ್ನು ನೀಡಿದ ಹಿರಿಮೆ ಹೊಂದಿದೆ ಎಂದು ಹೇಳಿದರು.
ಮಡಿಕೇರಿ ರೋಟರಿಯ ನೂತನ ಅಧ್ಯಕ್ಷ ರತನ್ ತಮ್ಮಯ್ಯ, ತನ್ನ ಅಧಿಕಾರ ಅವಧಿಯಲ್ಲಿ ಮಡಿಕೇರಿಯ ಹಸಿರೀಕರಣಕ್ಕೆ ಆದ್ಯತೆ ನೀಡುವುದರೊಂದಿಗೆ ಸ್ವಚ್ಛ ಮಡಿಕೇರಿ, ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ, ಶಿಕ್ಷಕರಿಗೆ ವೃತ್ತಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗುವುದ ಎಂದು ಹೇಳಿದರು.
ಮಡಿಕೇರಿ ರೋಟರಿಯ ನಿರ್ಗಮಿತ ಅಧ್ಯಕ್ಷ ಒ.ಎಸ್.ಚಿಂಗಪ್ಪ, ನಿರ್ಗಮಿತ ಕಾರ್ಯದರ್ಶಿ ಮೃಣಾಲಿನಿ ಹಾಜರಿದ್ದರು. ಡಾ.ಲೋಕೇಶ್ ಅವರನ್ನು ಮಡಿಕೇರಿ ರೋಟರಿಯ ನೂತನ ಸದಸ್ಯರನ್ನಾಗಿ ಸೇರ್ಪಡೆ ಮಾಡಲಾಯಿತು.
ಮಾತಂಡ ಸುರೇಶ್ ಚಂಗಪ್ಪ, ಡಿ.ಎಂ.ಕಿರಣ್,ಎಂ.ಎಂ.ಕಾರ್ಯಪ್ಪ, ಎಂ.ಈಶ್ವರ ಭಟ್, ಎನ್.ಡಿ.ಅಚ್ಚಯ್ಯ, ಅನಿಲ್ ಕೃಷ್ಣಾನಿ, ಡಾ.ಜನಾರ್ದನ್, ಅಮರ್ ಶಮ೯, ಎಂ.ಎಸ್. ಕರುಂಬಯ್ಯ, ಡಾ.ಮೋಹನ್ ಅಪ್ಪಾಜಿ, ಚಂಗಪ್ಪ,ಪಾರ್ವತಿ ಎಂ.ಜಿ., ಎನ್.ಸಿ. ಚೀಯಣ್ಣ, ಸಲೀಲಾ ಪಾಟ್ಕರ್, ಅಜಯ್ ಸೂದ್, ಮಂದಣ್ಣ, ಗೀತಾ ಗಿರೀಶ್ ವಿವಿಧ ಯೋಜನಾ ಸಮಿತಿಗಳ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.