ಮಡಿಕೇರಿ: ‘ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರನ್ನು ವೈಚಾರಿಕವಾಗಿ ಎದುರಿಸಲು ಸಾಧ್ಯವಿಲ್ಲದ ಕೆಲವು ಹತಾಶ ರಾಜಕಾರಣಿಗಳು ಅವರ ವಿರುದ್ಧ ದುರುದ್ದೇಶದಿಂದ ವಿನಾಕಾರಣ ವಿವಾದ ಸೃಷ್ಟಿಸುತ್ತಿದ್ದಾರೆ’ ಎಂದು ಹಿಂದೂ ಜಾಗರಣಾ ವೇದಿಕೆಯ ಕೊಡಗು ಜಿಲ್ಲಾ ಘಟಕವು ಆರೋಪಿಸಿದೆ.
‘ಹಿಂದೂವಾದಿ ಅನಂತಕುಮಾರ ಹೆಗಡೆ ವಿರುದ್ಧ ವ್ಯವಸ್ಥಿತ ಅಪಪ್ರಚಾರ, ಕುತಂತ್ರ ನಡೆಸಲಾಗುತ್ತಿದೆ. ಹೆಗಡೆ ಅವರು ಮಾಡಿದ ಭಾಷಣದಲ್ಲಿ ಬಳಸಿದ ಪದವೊಂದನ್ನು ಆಧರಿಸಿ, ಸೃಷ್ಟಿಸಿದ ವಿವಾದವನ್ನು ವೇದಿಕೆ ತೀವ್ರವಾಗಿ ಖಂಡಿಸುತ್ತದೆ’ ಎಂದೂ ಪ್ರಾಂತ ಪ್ರಧಾನ ಕಾರ್ಯದರ್ಶಿ ಕೆ.ಟಿ. ಉಲ್ಲಾಸ್ ತಿಳಿಸಿದ್ದಾರೆ.
‘ಹಿಂದೂ ಹೆಣ್ಣುಮಕ್ಕಳ ಮೇಲೆ ಕೈಹಾಕುವವರ ಕೈ ಇರಬಾರದು’ ಎಂಬ ಹೇಳಿಕೆಯನ್ನು ಅಂತಹ ಕಾನೂನನ್ನು ಜಾರಿಗೆ ತರಬೇಕು ಎನ್ನುವ ಅರ್ಥದಲ್ಲಿ ಸ್ವೀಕರಿಸದೇ ಅನಾವಶ್ಯಕ ವಿವಾದ ಮಾಡಲಾಗಿದೆ. ಹಿಂದೂವಾದಿಯ ತೇಜೋವಧೆಯನ್ನು ವೇದಿಕೆ ತೀವ್ರ ಖಂಡಿಸುತ್ತದೆ ಎಂದು ಹೇಳಿದ್ದಾರೆ.
‘ಕೇಂದ್ರ ಸಚಿವರಾಗಿ ಎಲ್ಲ ಹೆಣ್ಣುಮಕ್ಕಳ ಸುರಕ್ಷತೆಯ ಕುರಿತು ಹೆಗಡೆ ಮಾತನಾಡಬೇಕಿತ್ತು’ ಎನ್ನುವುದು ನಿಜವಾದರೂ ಅವರು ‘ಹಿಂದೂ ಮಹಿಳೆಯ ಸುರಕ್ಷತೆಗಾಗಿ ಕಠಿಣ ಕಾನೂನು ಜಾರಿಗೆ ಆಗ್ರಹಿಸಿರುವುದನ್ನು ವೇದಿಕೆ ಸಮರ್ಥಿಸುತ್ತದೆ’ ಎಂದು ಹೇಳಿದ್ದಾರೆ.
ತಾಜ್ಮಹಲ್, ಕುತುಬ್ ಮಿನಾರ್ಗಳ ಕುರಿತು ಹೆಗಡೆ ಆಡಿರುವ ಮಾತುಗಳು ನೂರಕ್ಕೆ ನೂರು ಸತ್ಯ; ಐತಿಹಾಸಿಕ ಸತ್ಯವನ್ನು ಪ್ರತಿಪಾದಿಸುವ ಎದೆಗಾರಿಕೆ ತೋರಿರುವ ಹೆಗಡೆ ದಿಟ್ಟತನವನ್ನು ವೇದಿಕೆ ಶ್ಲಾಘಿಸುತ್ತದೆ ಎಂದೂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.