ಕುಶಾಲನಗರ: ಶತಮಾನದ ಹೊಸ್ತಿನಲ್ಲಿರುವ ಇಲ್ಲಿನ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸವಿನೆನಪಿನಲ್ಲಿ ಮಾರುಕಟ್ಟೆ ರಸ್ತೆಯಲ್ಲಿ ₹2.90 ಕೋಟಿ ವೆಚ್ಚದಲ್ಲಿ ಆಧುನಿಕವಾಗಿ ನಿರ್ಮಾಣಗೊಂಡಿರುವ ಕಟ್ಟಡ ಜ.26 ರಂದು ಉದ್ಘಾಟನೆಗೊಳ್ಳಲಿದೆ.
ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 3139 ಸದಸ್ಯರಿಂದ ₹221.01 ಲಕ್ಷ ಪಾಲು ಬಂಡವಾಳ ಹೊಂದಿದೆ. ಸಂಘವು 1921 ನೇ ಇಸವಿಯಲ್ಲಿ ಪ್ರಾರಂಭಗೊಂಡಿದ್ದು, ಈಗ ₹1.05 ಕೋಟಿ ನಿವ್ವಳ ಲಾಭಗಳಿಸಿ ಇತಿಹಾಸ ನಿರ್ಮಿಸಿದೆ.
ಸಂಘದ ಕಟ್ಟಡ ನಿಧಿಯಿಂದ ₹1.5 ಕೋಟಿ ಹಾಗೂ ಕ್ಷೇಮಾನಿಧಿಯಿಂದ ₹1.4 ಕೋಟಿಯನ್ನು ಕಟ್ಟಡ ನಿರ್ಮಾಣಕ್ಕೆ ಉಪಯೋಗಿಸಲಾಗಿದೆ. ನೂತನ ಕಟ್ಟಡದಲ್ಲಿ ನಾಲ್ಕು ಅಂತಸ್ತುಗಳಿದ್ದು, ಆರ್.ಬಿ.ಐ ಮಾನದಂಡದಂತೆ ಆಧುನಿಕ ತಂತ್ರಜ್ಞಾನದಲ್ಲಿ ಲಾಕರ್, ಭದ್ರತಾ ಕೊಠಡಿ, ಲಿಫ್ಟ್ ವ್ಯವಸ್ಥೆ, ಕಚೇರಿ ಹವಾನಿಯಂತ್ರಿತ ವ್ಯವಸ್ಥೆ, ಸಿ.ಸಿ.ಟಿ.ವಿ ಕ್ಯಾಮೆರಾ, ವೈಬ್ರೇಟಿಂಗ್ ಮತ್ತು ಮೋಶನ್ ಸೆನ್ಸಾರ್, ಸ್ವಯಂ ಚಾಲಿತ ಗಾಜಿನ ಮುಂಭಾಗಿಲು ಅಳವಡಿಸಲಾಗಿದೆ. ಸಂಘದ ವ್ಯವಹಾರವು ಸಂಪೂರ್ಣ ಗಣಕೀಕೃತ ವ್ಯವಸ್ಥೆಯನ್ನು ಹೊಂದಿದೆ. ನೂತನ ಕಚೇರಿಯಲ್ಲಿ ತ್ವರಿತ ಮತ್ತು ಶಿಸ್ತುಬದ್ಧ ಸೇವೆಗಳಿಗೆ ಕ್ಯೂ ಮ್ಯಾನೇಜ್ ಮೆಂಟ್ ಪದ್ಧತಿ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಹೇಳಿದ್ದಾರೆ.
ಎರಡನೇ ಬಾರಿ ಅಧ್ಯಕ್ಷರಾಗಿರು ಟಿ.ಆರ್.ಶರವಣಕುಮಾರ, ಸಂಘದ ಕಟ್ಟಡ ಸಮಿತಿ ಸದಸ್ಯರಾದ ಆರ್.ಕೆ.ನಾಗೇಂದ್ರ ಬಾಬು, ವಿ.ಪಿ.ಶಶಿಧರ್, ಕೆ.ಪಿ.ಚಂದ್ರಕಲಾ, ಎಂ.ವಿ.ನಾರಾಯಣ, ಆಲ್ಬರ್ಟ್ ಡಿಸೋಜ ನೇತೃತ್ವದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ.
ಸಂಘದ ಉಪಾಧ್ಯಕ್ಷ ಕಾರ್ತೀಶನ್, ನಿರ್ದೇಶಕರಾದ ಪಿ.ಬಿ.ಯತೀಶ್, ಕೆ.ಎನ್.ಅಶೋಕ್, ವಿ.ಎಸ್.ಆನಂದ್ ಕುಮಾರ್, ಎಂ.ಕೆ.ಗಣೇಶ್, ಬಿ.ಎ.ಅಬ್ದುಲ್ ಖಾದರ್, ಸಿ.ಎಂ.ಗಣಿಪ್ರಸಾದ್, ಕೆ.ವಿ.ನೇತ್ರಾವತಿ, ಪಿ.ಎಂ.ಕವಿತಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಲೋಕೇಶ್ ಹಾಗೂ ಸಿಬ್ಬಂದಿ ಸಂಘದ ಬೆಳವಣಿಗೆಗೆ ಶ್ರಮಿಸಿದ್ದಾರೆ.
ಬ್ಯಾಂಕಿನ ಇತಿಹಾಸ: 1921ರ ಜೂನ್ 25 ರಂದು ಮುಳ್ಳುಸೋಗೆಯಲ್ಲಿ ಆರಂಭಗೊಂಡ ಈ ಸಂಘ 1948ರಲ್ಲಿ ಕುಶಾಲನಗರ (ಆಗಿನ ಪ್ರೆಸರ್ಪೇಟೆ)ಕ್ಕೆ ಸ್ಥಳಾಂತರಗೊಂಡು ಕುಶಾಲನಗರ ಸಹಕಾರಿ ಬ್ಯಾಂಕ್ ಎಂಬ ಹೆಸರಿನಲ್ಲಿ ಹೆಂಚಿನ ಮನೆಯ ಕಟ್ಟಡದಲ್ಲಿ ಕಾರ್ಯ ಆರಂಭಿಸಿತು. ಅಂದಿನ ಆಡಳಿತ ಮಂಡಳಿ ಅಧ್ಯಕ್ಷ ದಿ.ಎಸ್.ಎನ್.ರಾಮಶೆಟ್ಟಿ, ನಿರ್ದೇಶಕರಾದ ಎಸ್.ಪಿ.ಕಾಳೇಗೌಡ, ಸರಾಫ್ ಸುಬ್ಬಶೆಟ್ಟಿ, ಎಂ.ಪಿ.ವೆಂಕಟರಮಣ ಶೆಟ್ಟಿ, ಬಿ.ಮೈಲಾರಶೆಟ್ಟಿ, ಕರ್ಣಯ್ಯನ ಚಿಣ್ಣಪ್ಪ, ಎಚ್.ಪಿ.ಹೊನ್ನಪ್ಪ ಅವರು ಅಂದಾಜು ₹22,400 ಪಾಲು ಬಂಡವಾಳದೊಂದಿಗೆ ₹10,290 ಠೇವಣಿ ಕ್ರೋಡೀಕರಿಸಿ ಸೇವೆಯನ್ನು ಆರಂಭಿಸಿದ್ದರು.
1985ರಲ್ಲಿ ಅಧ್ಯಕ್ಷರಾಗಿದ್ದ ಟಿ.ಎಸ್.ನೇಮಿರಾಜ್ ಸಂಘದ ಕಟ್ಟಡಕ್ಕೆ ಸಾಗುವಳಿ ಚೀಟಿ ಮತ್ತು ಪುರಸಭೆಯಿಂದ 4 ಸೆಂಟ್ ಜಾಗಕ್ಕೆ ಜಮಾಬಂಧಿಯನ್ನು ಪಡೆದು ಹಳೆಯ ಕಟ್ಟಡವನ್ನು ಕೆಡವಿ ಆರ್ಸಿಸಿ ಕಟ್ಟಡ ನಿರ್ಮಿಸಿದ್ದರು.1996–97ರಲ್ಲಿ ಅಧ್ಯಕ್ಷರಾಗಿದ್ದ ಕೆ.ಪಿ.ಚಂದ್ರಕಲಾ ಸ್ಥಗಿತಗೊಂಡಿದ್ದ ಚಿನ್ನಾಭರಣ ಈಡಿನ ಮೇಲಿನ ಸಾಲ ವ್ಯವಸ್ಥೆಯನ್ನು ಮತ್ತೆ ಆರಂಭಿಸಿದರು. ಜೊತೆಗೆ ಸಾಲಗಳ ಮಿತಿ ಹೆಚ್ಚಿಸಿ ಸಂಘವನ್ನು ಲಾಭದತ್ತ ಸಾಗಲು ಕಾರಣರಾದರು.
2011–12 ರಲ್ಲಿ ಸಂಘದ ಅಧ್ಯಕ್ಷ ಪಿ.ಬಿ.ಯತೀಶ್ ಮತ್ತು ಆಡಳಿತ ಮಂಡಳಿ ಪ್ರಯತ್ನದಿಂದ ತ್ಯಾಗರಾಜ ರಸ್ತೆಯಲ್ಲಿರುವ 8.5 ಸೆಂಟ್ ಜಾಗವನ್ನು ಹತ್ತಿ ಸಹಕಾರ ಸಂಘದಿಂದ ₹18 ಲಕ್ಷ ವೆಚ್ಚದಲ್ಲಿ ಖರೀದಿಸಲಾಯಿತು.
26 ರಂದು ನೂತನ ಕಟ್ಟಡ ಉದ್ಘಾಟನೆ: ಬೆಳಿಗ್ಗೆ 11 ಗಂಟೆಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಭದ್ರತಾ ಕೊಠಡಿಯನ್ನು, ಶಾಸಕ ಕೆ.ಜಿ.ಬೋಪಯ್ಯ ಸಹಕಾರ ಧ್ವಜಾರೋಹಣ ನೆರವೇರಿಸುವರು.ಹಿರಿಯ ಸಹಕಾರಿ ಎಂ.ಸಿ.ನಾಣಯ್ಯ ವೇದಿಕೆ ಕಾರ್ಯಕ್ರಮ ಉದ್ಘಾಟಿಲಿದ್ದಾರೆ. ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಬಿ.ಡಿ.ಮಂಜುನಾಥ್, ಸಹಕಾರ ಸಂಘಗಳ ಉಪ ನಿಬಂಧಕರಾದ ಭಾಸ್ಕರಾಚಾರ್, ಸಹಾಯಕ ನಿಬಂಧಕ ಎಚ್.ಡಿ.ರವಿಕುಮಾರ್ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಎಂ.ಸಿ.ನಾಣಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಲೋಕೇಶ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.