ಸುಂಟಿಕೊಪ್ಪ: ಸಾಮಾಜಿಕ ಜಾಲತಾಣಗಳನ್ನು ಸದುದ್ದೇಶಕ್ಕೂ ಬಳಸಬಹುದು ಎಂಬುದಕ್ಕೆ ಉದಾಹರಣೆಯಾಗಿ ಸುಂಟಿಕೊಪ್ಪದ ಐವರು ಯುವಕರು ಆರಂಭಿಸಿದ ‘ನಮ್ಮ ಸುಂಟಿಕೊಪ್ಪ’ ಫೇಸ್ಬುಕ್ ಬಳಗ ಈಗ ಎರಡನೇ ವಾರ್ಷಿಕೋತ್ಸವ ಆಚರಣೆಗೆ ಸಿದ್ಧತೆ ನಡೆಸಿದೆ.
ಸುಂಟಿಕೊಪ್ಪದ ಡೆನಿಸ್ ಡಿಸೋಜ, ಝಾಯ್ದ್ ಆಹ್ಮದ್, ರಂಜಿತ್ ಕುಮಾರ್, ಕೆ.ಎಸ್.ಅನಿಲ್ ಕುಮಾರ್, ರಾಜೀವ್ ’ನಮ್ಮ ಸುಂಟಿಕೊಪ್ಪ’ ಫೇಸ್ ಬುಕ್ ಖಾತೆ ಆರಂಭಿಸಿದರು. ಫೇಸ್ ಬುಕ್ ಮೂಲಕ ಸುಂಟಿಕೊಪ್ಪದ ಮಾಹಿತಿ, ಸಮಸ್ಯೆಗಳ ಹಂಚಿಕೆ ಇದರ ಉದ್ದೇಶ.
ಝಾಯ್ದ್ ಆಹ್ಮದ್ ಅವರು ಸೌದಿ ಅರೇಬಿಯಾದ ದಮಾಮ್ನಲ್ಲಿ ಕೆಲಸದಲ್ಲಿದ್ದರು. ಅಲ್ಲಿ ಸುಂಟಿಕೊಪ್ಪದ ಯಾವುದೇ ಮಾಹಿತಿ ಸಿಗದ ಬಗ್ಗೆ ಸ್ನೇಹಿತರಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದರು. ತಿಳಿಯಬೇಕು ಎಂಬ ಚಿಂತನೆಯ ಫಲವೇ ಫೇಸ್ಬುಕ್ ಖಾತೆ.
ಉದ್ಯೋಗಕ್ಕಾಗಿ ವಿವಿಧೆಡೆ ಹೋಗಿರುವ ಸುಂಟಿಕೊಪ್ಪ ಮೂಲದವರಿಗೆ ಮಾಹಿತಿ ನೀಡುವುದು ಉದ್ದೇಶ. ಅದರ ಪ್ರಕಾರ, ಸ್ನೇಹಿತರ ಜೊತೆಗೂಡಿ ಖಾತೆ ತೆರೆದರು.
ನಿತ್ಯ ಏನನ್ನೂ ಪೋಸ್ಟ್ ಮಾಡಬೇಕು ಎಂದು ಗೆಳೆಯರ ಜೊತೆಗೂಡಿ ಚರ್ಚಿಸಿ ಪೋಸ್ಟ್ ಮಾಡಲಾಗುತ್ತದೆ. ಸುಂಟಿಕೊಪ್ದದ ಮಾಹಿತಿ ಹೊರತುಪಡಿಸಿ ಇತರೆ ವಿಷಯಗಳು ಇರುವುದಿಲ್ಲ. ನಿಧನ ವಾರ್ತೆ, ಹಳೆಯ ಚಿತ್ರಗಳು, ಸುಂಟಿಕೊಪ್ಪ ಅಂದು–ಇಂದು, ಇಲ್ಲಿಯ ಸಮಸ್ಯೆಗಳ ಬಗ್ಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.
ಇದರ ಜೊತೆಗೆ ಈ ಯುವಕರ ತಂಡ ಸಮಾಜಸೇವೆಯಲ್ಲಿ ತೊಡಗಿಕೊಂಡಿದೆ. ಗಿಡ ನೆಡುವ, ಸ್ವಚ್ಛ ಮಾಡುವ ಹಾಗೂ ಶಾಲಾ ಕಾಲೇಜುಗಳಿಗೆ ತೆರಳಿ ಯುವ ಸಬಲೀಕರಣದ ಬಗ್ಗೆ ಕಾರ್ಯಾಗಾರ, ಶಿಬಿರವನ್ನು ನಡೆಸುತ್ತಿದೆ.
ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಮಕ್ಕಂದೂರು, ತಂತಿಪಾಲ, ಮೇಘತಾಲ, ಮುಕ್ಕೋಡ್ಲು, ಹಟ್ಟಿಹೊಳೆಗೆ ತೆರಳಿ ಗ್ರಾಮಸ್ಥರಿಗೆ ಸಾಂತ್ವನ ಹೇಳಿ ಅವರಿಗೆ ನೆರವಾಗಿದ್ದಾರೆ.
ಫೇಸ್ಬುಕ್ ಖಾತೆಗೆ 2 ವರ್ಷವಾದ ಹಿನ್ನೆಲೆಯಲ್ಲಿ ಜ.20ರಂದು ಕಾರ್ಯಕ್ರಮ ಏರ್ಪಡಿಸಿದ್ದು, ಪೂರಕ ಲಾಂಛನವನ್ನು ಉದ್ಯಮಿ ಶಾಂತರಾಮ್ ಕಾಮತ್ ಬಿಡುಗಡೆ ಮಾಡಿದರು. ಅಂದು ಸಂತ ಅಂತೋಣಿ ಶಾಲೆ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮ ನಡೆಯಲಿವೆ.
’ನಮ್ಮ ಸುಂಟಿಕೊಪ್ಪ ಬಳಗ’ದ ಅಧ್ಯಕ್ಷ ರಂಜಿತ್ ಕುಮಾರ್ ಅಧ್ಯಕ್ಷತೆ ವಹಿಸುವರು. ನಮ್ಮ ಸುಂಟಿಕೊಪ್ಪ ಫೇಸ್ ಬುಕ್ ಪೇಜ್ ಅನ್ನು 5556 ಮಂದಿ ಫಾಲೋ ಮಾಡುತ್ತಿದ್ದು, 2500ಕ್ಕಿಂತಲೂ ಹೆಚ್ಚಿನ ಪೋಸ್ಟ್ ಮಾಡಲಾಗಿದೆ. 1 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಎಂದು ತಂಡದ ಡೆನಿಸ್ ಡಿಸೋಜ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.