ಕುಶಾಲನಗರ: ಪಟ್ಟಣದ ವಿವಿಧೆಡೆ ಶಾಸ್ತ್ರ ಹೇಳುವ ನೆಪದಲ್ಲಿ ಮನೆಗಳಿಗೆ ಹೋಗಿ ಚಿನ್ನ ಹಾಗೂ ನಗದು ಲಪಟಾಯಿಸುತ್ತಿದ್ದ ಮೂವರು ಮಹಿಳೆಯರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ವೇದಾವತಿ ನಗರದ ಭಜನಾ ಮಂದಿರ ರಸ್ತೆಯ ಲಕ್ಷ್ಮಿ, ರಾಣೆಬೆನ್ನೂರು ನಗರ ಆಂಜನೇಯ ಬಡಾವಣೆಯ ಲಕ್ಷ್ಮಿ ಹಾಗೂ ಸುಜಾತಾ ಬಂಧಿತರು.
ಆರೋಪಿಗಳನ್ನು ಪೊಲೀಸರು ಕೊಪ್ಪ ಕಾಫಿ ಡೇ ಸಮೀಪದ ರಿಲಯನ್ಸ್ ಪೆಟ್ರೋಲ್ ಬಂಕ್ ಬಳಿ ಬಂಧಿಸಿದ್ದಾರೆ. ಬಂಧಿತರಿಂದ 135 ಗ್ರಾಂ ಚಿನ್ನ ಹಾಗೂ ₹ 27,000 ನಗದು ವಶ ಪಡಿಸಿಕೊಂಡಿದ್ದಾರೆ.
ಈಚೆಗೆ ಆರೋಪಿ ಲಕ್ಷ್ಮಿಯು ಪಟ್ಟಣದ ಬೈಚನಹಳ್ಳಿಯ ಲಕ್ಷ್ಮಿ ದೇವರಾಜು ಅವರ ಮನೆಗೆ ಹೋಗಿ ಶಾಸ್ತ್ರ ಹೇಳುವ ನೆಪದಲ್ಲಿ ಟಿಫನ್ ಬಾಕ್ಸ್ಗೆ ಮನೆಯಲ್ಲಿರುವ ಚಿನ್ನ ಮತ್ತು ಹಣ ಹಾಕುವಂತೆ ಹೇಳಿದ್ದಾರೆ. ‘ನಿನ್ನ ಎಲ್ಲ ಕಷ್ಟವನ್ನು ಪರಿಹಾರ ಮಾಡುತ್ತೇನೆ’ ಎಂದು ನಂಬಿಸಿ ಮತ್ತು ಬರುವ ಪುಡಿಯನ್ನು ಜ್ಯೂಸ್ನಲ್ಲಿ ಬೆರಸಿ ಕುಡಿಸಿ ಮಂಕು ಬರುವಂತೆ ಮಾಡಿದ್ದಳು. ನಂತರ ಚಿನ್ನ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಳು. ಮೂವರು ಮಹಿಳೆಯರು ಇದೇ ರೀತಿ ಮಹಿಳೆಯರಿಗೆ ಮೋಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೋಸ ಹೋದ ಲಕ್ಷ್ಮಿ ಮಗ ಶ್ರೀಕಾಂತನೊಂದಿಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದರು.
ಡಿವೈಎಸ್ಪಿ ಶೈಲೇಂದ್ರ ಅವರು ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ ಹಾಗೂ ಟೌನ್ ಠಾಣೆಯ ಪಿಎಸ್ಐ ಗಣೇಶ್ ನೇತೃತ್ವದಲ್ಲಿ ತಂಡ ರಚಿಸಿ ಮಹಿಳೆಯರನ್ನು ಪತ್ತೆ ಹಚ್ಚಲು ಕ್ರಮಕೈಗೊಂಡರು.
‘ಪಟ್ಟಣದ ವಾರದ ಸಂತೆ ಹಾಗೂ ಗ್ರಾಮಗಳಲ್ಲಿ ಇಂಥ ಘಟನೆಗಳು ನಡೆದ ಬಗ್ಗೆ ವರದಿಯಾಗಿವೆ. ಅಮಾಯಕರನ್ನು ಗುರಿ ಮಾಡಿಕೊಂಡು ಮೋಸ ಮಾಡುವ ಕಳ್ಳರ ತಂಡ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಮಹಿಳೆಯರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ಡಿವೈಎಸ್ಪಿ ಶೈಲೇಂದ್ರ ಮನವಿ ಮಾಡಿದ್ದಾರೆ.