ಗೋಣಿಕೊಪ್ಪಲು: ಕೊಡವ, ಮುಸ್ಲಿಂ ಜನಾಂಗದ ಧಾರ್ಮಿಕ ಸಾಮರಸ್ಯದ ಪ್ರಮುಖ ಕೇಂದ್ರ ಪೊನ್ನಂಪೇಟೆ ತಾಲ್ಲೂಕಿನ ಬಿ.ಶೆಟ್ಟಿಗೇರಿ ಬಳಿ ಇರುವ ಕುತ್ತುನಾಡ್. ಇಲ್ಲಿ ಕೊಡವರು ಮತ್ತು ಮುಸಲ್ಮಾನರು ಒಟ್ಟಾಗಿ ಸೇರಿದರೆ ಮಾತ್ರ ಇಲ್ಲಿ ನೇರ್ಚೆ (ಉರೂಸ್) ನಡೆಯುತ್ತದೆ.
ಸೂಫಿ ಶಹೀದ್ ವಲಿಯುಲ್ಲಾರವರ ಸಮಾಧಿ ಎನ್ನಲಾಗುವ ಈ ಸ್ಥಳದಲ್ಲಿ ನಡೆಯುವ ಉರೂಸ್ನಲ್ಲಿ ಉಭಯ ಧರ್ಮದವರಿಗೂ ಸಮಾನ ಸ್ಥಾನವಿದೆ. ಕೊಡವರು ಮತ್ತು ಮುಸ್ಲಿಂಮರು ಒಗ್ಗೂಡಿ ಆಚರಿಸುವ ಮಹತ್ವದ ಉರೂಸ್ (ನೇರ್ಚೆ) ಇದು. ವಿಭಿನ್ನ ಧರ್ಮದವರು ಒಂದುಗೂಡಿ ನಡೆಸುವ ಈ ನೇರ್ಚೆ (ಉರೂಸ್) ಉತ್ಸವ ಮೇ 20ರಂದು ಜರುಗಲಿದೆ.
ಪೊನ್ನಂಪೇಟೆ ಬಳಿಯ ಬೇಗೂರು ಕಲ್ಲಾಯಿ ಮಸೀದಿಯ ಆಡಳಿತ ಮಂಡಳಿ, ಬೇಗೂರು- ಮಾಪಿಳ್ಳೆತೋಡಿನ ತಕ್ಕರು (ಊರಿನ ಹಿರಿಯ ಮುಖ್ಯಸ್ಥರು) ಕುತ್ತುನಾಡಿಗೆ ತೆರಳಿ ಅಲ್ಲಿ ಕರ್ತುರ ಕುಟುಂಬದ ತಕ್ಕರು ಮತ್ತು ಗ್ರಾಮಸ್ಥರೊಂದಿಗೆ ಸೇರಿ ಕುತ್ತುನಾಡು ಉರೂಸ್ನ ದಿನವನ್ನು ನಿಶ್ಚಯಿಸುತ್ತಾರೆ. ಬಿ.ಶೆಟ್ಟಿಗೇರಿ ಸಮೀಪದ ಕೊಂಗಣ ಗ್ರಾಮಕ್ಕೆ ಒಳಪಟ್ಟಿರುವ ನಾಡುಗುಂಡಿ ಹೊಳೆದಡದ ಕಾಡಿನಲ್ಲಿ ಸೂಫಿ ಶಹೀದ್ ಅವರ ಸ್ಮಾರಕ ಬಿಡಾರವಿದೆ. ಉರೂಸ್ನ ದಿನದಂದು ಬಿಡಾರದ ಬಳಿ ಬೆಳಿಗ್ಗೆ 8 ಗಂಟೆಗೆ ಆಲೀರ ಮತ್ತು ಕರ್ತುರ ಕುಟುಂಬದ ತಕ್ಕರು ಜಂಟಿಯಾಗಿ ಧ್ವಜಾರೋಹಣ ನೆರವೇರಿಸುವ ಮೂಲಕ ಉರೂಸ್ಗೆ ಚಾಲನೆ ನೀಡುತ್ತಾರೆ. ಬಳಿಕ ಸಾಮೂಹಿಕ ಪ್ರಾರ್ಥನೆ ಜರುಗಿ ಧಾರ್ಮಿಕ ಆಚರಣೆಗಳು ಆರಂಭಗೊಳ್ಳುತ್ತವೆ.
ಭಂಡಾರ ಜಮಾಯಿಸುವುದು: ಉರೂಸ್ ದಿನದಂದು ಬೆಳಿಗ್ಗೆ ಬಿಡಾರದ ಮುಂಭಾಗದಲ್ಲಿರುವ ಹೊಳೆಯಲ್ಲಿ ಬಾಳೆಗೊನೆಯೊಂದನ್ನು ಮುಳುಗಿಸಿ ಬಿಡಾರದ ದ್ವಾರದ ಮೇಲ್ಬಾಗದಲ್ಲಿ ಕಟ್ಟಲಾಗುತ್ತದೆ. ಈ ವೇಳೆ ಆಲೀರ ಕುಟುಂಬದ ತಕ್ಕರು ಪ್ರಾರ್ಥನೆ ಸಲ್ಲಿಸಿ ದ್ವಾರದ ಎಡಭಾಗದಲ್ಲಿ ಕೂರುತ್ತಾರೆ. ನಂತರ, ಕೊಡವ ಜನಾಂಗದ ಕರ್ತುರ ಕುಟುಂಬದ ತಕ್ಕರನ್ನು ಗೌರವಪೂರ್ವಕವಾಗಿ ಆಹ್ವಾನಿಸಿ ದ್ವಾರದ ಬಲಭಾಗದಲ್ಲಿ ಕೂರಿಸಿದ ನಂತರ ಭಂಡಾರ ಇಡುವ ಸಂಪ್ರದಾಯ ಆರಂಭವಾಗುತ್ತದೆ. ಕಾರ್ಯ ಮುಗಿಯುವವರೆಗೂ ಉಭಯ ತಕ್ಕರು ಎಡ-ಬಲದಲ್ಲಿ ಕುಳಿತು ಭಕ್ತರಿಗೆ ಪ್ರಸಾದ ವಿತರಿಸುತ್ತಾರೆ. ಹುರಿದ ಅಕ್ಕಿ, ಕರಿಮೆಣಸು ಹಾಗೂ ಸಕ್ಕರೆಯಿಂದ ತಯಾರಿಸಿದ ಕಾಪೊಡಿ ಮತ್ತು ನೇರ್ಚೆ ಗುಂಡಿಯಲ್ಲಿ ಮುಳುಗಿಸಿ ತಂದ ಬಾಳೆ ಹಣ್ಣು ಇಲ್ಲಿ ಭಕ್ತರಿಗೆ ನೀಡುವ ಪ್ರಸಾದವಾಗಿದೆ.
ಹಾಲನ್ನ ಪ್ರಸಾದ: ಉಭಯ ಸಮುದಾಯದವರು ಜೊತೆಗೂಡಿ ಬಿಡಾರದ ಆವರಣದಲ್ಲಿ 3 ಕಲ್ಲುಗಳನ್ನು ಜೋಡಿಸಿ ಪಾತ್ರೆಯಲ್ಲಿ ಹರಕೆ ರೂಪದಲ್ಲಿ ತರುವ ಹಾಲನ್ನೆಲ್ಲ ಹಾಕಿ ಕುದಿಸುತ್ತಾರೆ. ಕುದಿಯುವ ಹಾಲಿಗೆ ಅಕ್ಕಿಯನ್ನು ಹಾಕಿ ಹಾಲು ಮತ್ತು ಅಕ್ಕಿಯಿಂದ ಪ್ರಸಾದವನ್ನು ತಯಾರಿಸಿ ಸ್ಥಳದಲ್ಲೇ ಬಿಸಿ ಬಿಸಿಯಾಗಿ ವಿತರಿಸುತ್ತಾರೆ. ನಂತರ, ಎಲ್ಲರಿಗೂ ಮಾಂಸಾಹಾರ ಅನ್ನ ಪ್ರಸಾದವನ್ನು ವಿತರಿಸಲಾಗುತ್ತದೆ. ಕುರಿ ಅಥವಾ ಕೋಳಿಮಾಂಸ ಮತ್ತು ತುಪ್ಪದ ಅನ್ನ ಇಲ್ಲಿನ ಅನ್ನ ಪ್ರಸಾದದ ವಿಶೇಷ.
ಹಲವು ವೈಶಿಷ್ಟ್ಯಗಳಿಂದ ಕೂಡಿರುವ ಉರೂಸ್ ಹಾಲನ್ನ ಪ್ರಸಾದ ಇಲ್ಲಿನ ವಿಶೇಷ ಕುರಿ ಅಥವಾ ಕೋಳಿಮಾಂಸ, ತುಪ್ಪದ ಅನ್ನ ಅನ್ನ ಪ್ರಸಾದ ವಿತರಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.