ಕುಶಾಲನಗರ: ಪ್ರಥಮ ಸ್ಪರ್ಧೆಯಲ್ಲೇ ಪ್ರಥಮ ಬಹುಮಾನ ಗೆಲ್ಲುವ ಮೂಲಕ ನೃತ್ಯದಲ್ಲಿ ಸಾಧನೆ ಮಾಡಬೇಕೆಂಬ ಆಸೆ ಹೊತ್ತಿರುವ ಸಿಂಚನಾ ಎಂಬ ಒಂಬತ್ತು ವರ್ಷದ ಪುಟ್ಟ ಪೋರಿಗೆ ಡ್ಯಾನ್ಸರ್ ಆಗಬೇಕೆಂಬ ಹಂಬಲ.
ಪಟ್ಟಣದ ನಿವಾಸಿ ಕಾಲೇಜು ಉಪನ್ಯಾಸಕರೂ ಆಗಿರುವ ಬಿಸ್ಟಪ್ಪ ತಲ್ವಾರ್ ಮತ್ತು ನೇತ್ರಾವತಿ ಬಿ. ತಲ್ವಾರ್ ದಂಪ ತಿಯ ಮಗಳು ಸಿಂಚನಾ. ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಇರುವಾಗಲೇ ಅದು ಹೇಗೋ ಡ್ಯಾನ್ಸ್ನ ಗೀಳು ಹಚ್ಚಿಕೊಂಡ ಈ ಪೋರಿ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಬಹು ಮಾನವನ್ನು ತನ್ನ ಮುಡಿಗೇರಿಸಿ ಕೊಂಡಿದ್ದಾಳೆ.
ಪಟ್ಟಣದ ಫಾತಿಮಾ ಕಾನ್ವೆಂಟ್ನಲ್ಲಿ ನಾಲ್ಕನೇ ತರಗತಿ ಕಲಿಯುತ್ತಿರುವ ಸಿಂಚನಾ ದೊಡ್ಡ ಸಾಧನೆ ಮಾಡುವ ಗುರಿ ಹೊಂದಿದ್ದಾಳೆ.
ಒಂದನೇ ತರಗತಿಯಲ್ಲಿ ಇರು ವಾಗಲೇ ಪಟ್ಟಣದ ಟೀಂ ಆ್ಯಟಿಟ್ಯೂಡ್ ಡ್ಯಾನ್ಸ್ ಸ್ಟುಡಿಯೋ ನೃತ್ಯ ಶಾಲೆಯಲ್ಲಿ ತನ್ನ ನೃತ್ಯ ಕಲಿಯಲು ಆರಂಭಿಸಿದಳು. ಅವಳ ಹಂಬಲಕ್ಕೆ ನೀರೆರೆದು ಬೆಳೆಸುತ್ತಿ ರುವವರು ನೃತ್ಯ ಶಿಕ್ಷಕರಾದ ಕೆ.ಟಿ. ಕಿರಣ್ ಮತ್ತು ಎಂ. ಸಚಿನ್.
ಸುಂಟಿಕೊಪ್ಪದದಲ್ಲಿ ಪ್ರತಿ ವರ್ಷ ನಡೆಯುವ ಕನ್ನಡ ರಾಜ್ಯೋತ್ಸವದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮೊದಲಿಗೆ ಪ್ರಥಮ ಬಹುಮಾನ ಲಭಿಸಿದೆ. ಅಂದಿನಿಂದ ಪ್ರಥಮ ಬಹುಮಾನಗಳ ಸುರಿಮಳೆ ನಿಂತಿಲ್ಲ.
ಹಾಸನದ ನೂಪುರ್ಸ್ ಡ್ಯಾನ್ಸ್ ಅಕಾಡೆಮಿ 2013ರಲ್ಲಿ ನಡೆಸಿದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಸೋಲೊ ವಿಭಾಗದ ಹಿಪ್ಹಾಪ್ನಲ್ಲಿ ಹಾಗೂ ಗ್ರೂಪ್ ಡ್ಯಾನ್ಸ್ನಲ್ಲಿ ಪ್ರಥಮ ಬಹುಮಾನವನ್ನು ತನ್ನದಾಗಿಸಿ ಕೊಂಡಿದ್ದಾಳೆ. 2014ರಲ್ಲಿ ಮೈಸೂರಿನ ಯುವ ಸ್ಕೂಲ್ ಆಫ್ ಡ್ಯಾನ್ಸ್ ಅವರು ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲೂ ಸೋಲೊ ಮತ್ತು ಗ್ರೂಪ್ ಡ್ಯಾನ್ಸ್ನಲ್ಲಿ ಪ್ರಥಮ ಬಹುಮಾನ ಗಳಿಸಿಕೊಂಡಿ ದ್ದಾಳೆ. ಮೈಸೂರಿನ ವಿಶ್ವ ಪ್ರಸಿದ್ಧ ಯುವ ದಸರಾದಲ್ಲೂ ಸೋಲೊ ವಿಭಾಗದ ಹಿಪ್ಹಾಪ್ನಲ್ಲಿ ಪ್ರಥಮ ಬಹುಮಾನ ವನ್ನು ತಮ್ಮ ಮುಡಿಗೇರಿಸಿಕೊಂಡ ಗರಿಮೆ ಈ ಪೋರಿಯದು.
ಹೀಗೆ ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಗಳಿಸಿರುವ ಬಹುಮಾನಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ 2014ರಲ್ಲಿ ನಡೆದ ನ್ಯಾಷನಲ್ ಎಂ.ಜೆ. ಅವಾರ್ಡ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.
ಬೆಂಗಳೂರಿನ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಪ್ರತಿಷ್ಠಾನವು ಈ ಪೋರಿಯ ಪ್ರತಿಭೆಯನ್ನು ನೋಡಿ ‘ಕಲಾನವರತ್ನ’ ಬಿರುದು ನೀಡಿ ಗೌರವಿಸಿದೆ. ಅಲ್ಲದೇ ವರಕವಿ ಬೇಂದ್ರೆ ಸಾಂಸ್ಕೃತಿಕ ಕಲಾಪ್ರತಿಭೋತ್ಸವದಲ್ಲಿ ರಾಷ್ಟ್ರೀಯ ವಿಕಾಸ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬೆಂಗಳೂರಿನಲ್ಲಿ 2015ರ ಮೇ ತಿಂಗಳಲ್ಲಿ ನಡೆದ ಅಖಿಲ ಭಾರತ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲೂ ರಾಷ್ಟ್ರೀಯ ಕಲಾ ನವರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.