ತಲಕಾವೇರಿ: ಜೀವನದಿ ಕಾವೇರಿಯ ಉಗಮಸ್ಥಾನವಾದ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಸೋಮವಾರ ಮಧ್ಯರಾತ್ರಿ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಉದ್ಭವಿಸಿ, ಭಕ್ತರಿಗೆ ದರುಶನ ನೀಡಿ ಕೃತಾರ್ಥರನ್ನಾಗಿಸಿದಳು.
ನೆರೆಹೊರೆಯ ಜಿಲ್ಲೆಗಳಿಂದಲ್ಲದೇ, ಪಕ್ಕದ ಕೇರಳ, ತಮಿಳುನಾಡಿನಿಂದಲೂ ಸಹಸ್ರಾರು ಭಕ್ತರು ಆಗಮಿಸಿ, ಕಾವೇರಿಯ ತೀರ್ಥೋದ್ಭವಕ್ಕೆ ಸಾಕ್ಷಿಯಾದರು. ವರ್ಷಕ್ಕೊಮ್ಮೆ ಮಿಥುನ ಲಗ್ನದಲ್ಲಿ ಘಟಿಸುವ ಈ ಅಪರೂಪದ ಪ್ರಸಂಗವನ್ನು ಕಣ್ಮನಗಳಲ್ಲಿ ತುಂಬಿಕೊಂಡರು.
ಸುಮಾರು ಮೂರು ಗಂಟೆಗಳವರೆಗೆ ಮೈ ಕೊರೆಯುವ ಚಳಿಯಲ್ಲಿ ನಿಂತಿದ್ದ ಭಕ್ತ ಸಮೂಹಕ್ಕೆ ತೀರ್ಥೋದ್ಭವವನ್ನು ಕಂಡಕ್ಷಣದಲ್ಲಿಯೇ ಆಯಾಸ ಕರಗಿಹೋಯಿತು. ಭಕ್ತಿಪರವಶಕ್ಕೆ ಒಳಗಾದ ಭಕ್ತರು ಮುಗಿಲು ಮುಟ್ಟುವಂತೆ ಕಾವೇರಿ ಮಾತೆಗೆ ಜೈಕಾರಗಳನ್ನು ಕೂಗಿದರು.
ತೀರ್ಥೋದ್ಭವದ ತೀರ್ಥವನ್ನು ಅರ್ಚಕರು ಭಕ್ತರೆಡೆ ಪ್ರೋಕ್ಷಿಸಿ, ಪಾವನಗೊಳಿಸಿದರು. ದೇವಿ ಸನ್ನಿಧಿಯ ಎದುರಿನ ಸ್ನಾನಕೊಳದ ಸುತ್ತಲೂ ಜಮಾಯಿಸಿದ್ದ ಭಕ್ತರು ಕೊಳದಲ್ಲಿ ನಾಣ್ಯ ಹಾಕಿ ಕೈಮುಗಿದು, ಕಾವೇರಿ ಮಾತೆಯನ್ನು ಬೇಡಿಕೊಂಡರು.
ಕಾವೇರಿ ತೀರ್ಥವನ್ನು ಪಡೆಯಲು ಬ್ರಹ್ಮಕುಂಡಿಕೆ ಬಳಿ ಭಕ್ತರು ಮುಗಿಬಿದ್ದರು. ಇವರನ್ನು ನಿಯಂತ್ರಿಸಲು ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಪೊಲೀಸರು ಹರಸಾಹಸ ಪಟ್ಟರು.
ಇದಕ್ಕೂ ಮುಂಚೆ ಭಾಗಮಂಡಲದ ಭಗಂಡೇಶ್ವರ ದೇವಾಲಯದಿಂದ ದೇವತಕ್ಕರಾದ ಬಳ್ಳಡ್ಕ ಅಪ್ಪಾಜಿ, ಕೋಡಿ ಮೋಟಯ್ಯ ಅವರ ನೇತೃತ್ವದಲ್ಲಿ ಮಂಗಳವಾದ್ಯದೊಂದಿಗೆ ತಲಕಾವೇರಿಗೆ ತರಲಾದ ಚಿನ್ನಾಭರಣಗಳನ್ನು ಕಾವೇರಿ ಮಾತೆಗೆ ತೊಡಿಸಿ, ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.
ಕ್ಷೇತ್ರ ಪುರೋಹಿತರಾದ ಅನಂತ ಕೃಷ್ಣಾಚಾರ್, ರಾಮಕೃಷ್ಣಾಚಾರ್, ಶಂಕರಾಚಾರ್, ಪ್ರಶಾಂತಾಚಾರ್, ಮತ್ತಿತರ ವೈದಿಕರ ತಂಡವು ವಿಶೇಷ ಪೂಜೆ ಹಾಗೂ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿದವು.
ತಲಕಾವೇರಿ ದೇವಸ್ಥಾನದ ಆವರಣದೊಳಗೆ ದೇವಸ್ಥಾನ ಸಮಿತಿಯು ಅನ್ನದಾನ ನಡೆಸಿತು. ಮಂಡ್ಯದ ಕಾವೇರಿ ತೀರ್ಥೋದ್ಭವ ಅನ್ನಸಂತರ್ಪಣಾ ಸಮಿತಿ, ವೀರಾಜಪೇಟೆ ಕೊಡವ ಸಮಾಜ, ಹಿಂದೂ ಜಾಗರಣ ವೇದಿಕೆ ಹಾಗೂ ಇತರ ಸಂಸ್ಥೆಗಳು ಸಹ ಅನ್ನದಾನ ನಡೆಸಿದವು.
ವರುಣನ ಪ್ರೋಕ್ಷಣೆ: ತಲಕಾವೇರಿಯಲ್ಲಿ ಸೋಮವಾರ ತೀರ್ಥೋದ್ಭವಕ್ಕೆ ಅಂತಿಮ ಸಿದ್ಧತೆ ನಡೆಯುತ್ತಿದ್ದ ವೇಳೆ ಮಧ್ಯಾಹ್ನ ವರುಣ ಸಹ ಭೇಟಿ, ನಾಲ್ಕಾರು ಹನಿ ಪ್ರೋಕ್ಷಿಸಿ ಹೊರಟು ಹೋದ.
ತೀರ್ಥೋದ್ಭವದ ಸಿದ್ಧತೆಯನ್ನು ನೋಡಿಕೊಂಡು ಹೋಗಲು ದೇವಲೋಕದಿಂದ ಬಂದ ಧೂತನಂತೆ ವರುಣ ಬಂದು ಬ್ರಹ್ಮಗಿರಿ ತಪ್ಪಲಿನಲ್ಲಿ ಇಣುಕಿದಂತೆ ಈ ದೃಶ್ಯ ಗೋಚರಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.