ಗೋಣಿಕೊಪ್ಪಲು: ಭಾರತೀಯ ಸಂವಿಧಾನದಲ್ಲಿ ಸ್ತ್ರೀ- ಪುರುಷರಿಗೆ ಸಮಾನತೆ ಕಲ್ಪಿಸಿದ್ದರೂ ಪ್ರಸ್ತುತ ಸಮಾಜದಲ್ಲಿ ಅದನ್ನು ಕಾಣಲು ಸಾಧ್ಯವಾಗುತ್ತಿಲ್ಲ ಮೈಸೂರು ವಿವಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಆರ್. ಇಂದಿರಾ ವಿಷಾದಿಸಿದರು.
ಸ್ಥಳೀಯ ಕಾವೇರಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಯುಜಿಸಿ ಪ್ರಾಯೋಜಕತ್ವದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ಮಹಿಳೆ ಮತ್ತು ಮಾನವಹಕ್ಕು ಕುರಿತ ವಿಚಾರ ಸಂಕಿರಣದಲ್ಲಿ ಶುಕ್ರವಾರ ಅವರು ಮಾತನಾಡಿದರು.
ಎಲ್ಲ ರಂಗಗಳಲ್ಲಿಯೂ ಮುಂಚೂಣಿಯಲ್ಲಿರುವ ಮಹಿಳೆ ಮೇಲೆ ಹಿಂದೆಂದೂ ಕಂಡರಿಯದ ರೀತಿಯಲ್ಲಿ ದೌರ್ಜನ್ಯ ನಡೆಯತ್ತಿದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ತನ್ನ ತನವನ್ನು ರಕ್ಷಿಸಿಕೊಂಡು ಬದುಕು ಸಾಗಿಸುವುದು ಕಷ್ಟವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಶಿಕ್ಷಣ ಹೆಚ್ಚದಂತೆ ಲಿಂಗ ತಾರತಮ್ಯವೂ ಹೆಚ್ಚುತ್ತಿದೆ. ಭ್ರೂಣಾವಸ್ಥೆಯಲ್ಲಿಯೆ ಅಪಾಯ ಎದುರಿಸಬೇಕಾದ ಸ್ಥಿತಿ ಒದಗಿದೆ. ಲಿಂಗ ತಾರತಮ್ಯವನ್ನು ಹೋಗಲಾಡಿಸಲು ನಾಗರಿಕ ಸಮಾಜ ನಿರ್ಮಾಣದ ಅಗತ್ಯ ಇದೆ ಎಂದು ಪ್ರತಿಪಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಎ.ಚಿಣ್ಣಪ್ಪ ಮಾತನಾಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಎಂ.ಡಿ. ಅಕ್ಕಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಕೆ.ಎನ್. ಉತ್ತಪ್ಪ, ಪ್ರಾಂಶುಪಾಲ ಪ್ರೊ. ಪೂವಣ್ಣ ಮುಂತಾದವರು ಹಾಜರಿದ್ದರು.