ಕೋಲಾರ: ಸವಿತಾ ಸಮಾಜ ವಿವಿಧೊದ್ದೇಶ ಸಹಕಾರ ಸಂಘದಿಂದ ಮಂಗಳವಾರ ಎಸ್ಸೆಸ್ಸೆಲ್ಸಿ ಹಾಗೂ ಪಿಯುನಲ್ಲಿ ಅತಿಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ನಗರದ ಟಮಕದಲ್ಲಿರುವ ಸವಿತಾ ಸಮಾಜ ಸಹಕಾರ ಸಂಘ ಸಮುದಾಯ ಭವನದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್, ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
‘ಸವಿತಾ ಸಮಾಜವು ಮುಖ್ಯವಾಹಿನಿಗೆ ಬರಲು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ತಮ್ಮ ಸಮುದಾಯದ ಕೂಗು ವಿಧಾನಸೌಧ ಮುಟ್ಟಬೇಕು. ಆಗ ಮಾತ್ರ ಕೆಲಸ ಸಾಧ್ಯ’ ಎಂದು ಹೇಳಿದರು.
‘ಸವಿತಾ ಸಮುದಾಯವನ್ನು ಕೀಳಾಗಿ ನೋಡುತ್ತಿರುವ ಈ ಸಮಾಜದಲ್ಲಿ ಅವರಿಗೆ ಗೌರವ ಲಭಿಸಬೇಕೆಂದರೆ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಆಗ ಎಲ್ಲಾ ರೀತಿಯ ಹಕ್ಕುಗಳನ್ನು ಪಡೆದು ಅಭಿವೃದ್ಧಿ ಹೊಂದಬಹುದು’ ಎಂದರು.
‘ಕುಲಕಸುಬು ಮಾಡಿಕೊಂಡು ಜೀವನ ನಡೆಸುತ್ತಿರುವ ಸವಿತಾ ಸಮಾಜದವರು ಒಗ್ಗಟ್ಟಾಗಬೇಕು. ಆಗ ಜನಪ್ರತಿನಿಧಿಗಳು ಗಮನ ಹರಿಸುತ್ತಾರೆ. ಎಷ್ಟೇ ಕಷ್ಟವಿದ್ದರೂ ತಮ್ಮ ಮಕ್ಕಳಿಗೆ ಪೋಷಕರು ಗುಣಮಟ್ಟದ ಶಿಕ್ಷಣ ಕೊಡಿಸಬೇಕು’ ಎಂದರು.
ಬಿಜೆಪಿ ಮುಖಂಡ ಸೂರ್ಯ ಪ್ರಕಾಶ್, ಎಲ್ಜಿ ಫೌಂಡೇಶನ್ ಸಂಸ್ಥಾಪಕ ಲಕ್ಷ್ಮಣ್ ಗೌಡ, ಮಂಜುನಾಥ್ ಇದ್ದರು.