ಕೋಲಾರ: ‘ಅಧಿಕಾರದ ಮದದಿಂದ ಸಂಸದೆ ಶೋಭಾ ಕರಂದ್ಲಾಜೆ ಮೈತ್ರಿ ಸರ್ಕಾರದ ವಿರುದ್ಧ ಟ್ವೀಟರ್ನಲ್ಲಿ ಅಸಭ್ಯವಾಗಿ ಮಾತನಾಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಕಿಡಿಕಾರಿದರು.
ಜಿಲ್ಲೆಯ ಬಂಗಾರಪೇಟೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿಜೆಪಿಗೆ ಅಧಿಕಾರದ ಮದ ನೆತ್ತಿಗೇರಿದೆ, ಇದು ಸಾರ್ವಜನಿಕ ಜೀವನಕ್ಕೆ ಲಾಯಕ್ಕಾದ ಹೇಳಿಕೆಯಲ್ಲ. ಅವರ ಸಂಸಂಸ್ಕೃತಿಯನ್ನು ತೋರಿಸುತ್ತದೆ’ ಎಂದು ತಿರುಗೇಟು ನೀಡಿದರು.
‘ಕೈ ಮುರಿತೀವಿ, ಕಾಲು ಮುರಿತೀವಿ, ನಾಲಿಗ ಸೀಳ್ತೀವಿ ಅಂತ ಹಿಂದೆಯೂ ಬಿಜೆಪಿ ಮುಖಂಡರು ಹೇಳಿಕೆ ನೀಡಿದ್ದರು. ಈ ಹೇಳಿಕೆಗಳು ಇದು ಮೊದಲೇನಲ್ಲ. ಪಕ್ಷೇತರರಿಗೆ ಸಚಿವ ಸ್ಥಾನ ನೀಡಿರುವುದು ವರಿಷ್ಟರ ತೀರ್ಮಾನದಂತೆಯೇ, ಯಾವುದೇ ಭಿನ್ನಮತವಿಲ್ಲ’ ಎಂದು ಸ್ವಷ್ಟಪಡಿಸಿದರು.
‘ಇದೀಗ ಪಕ್ಷ ಖಾಲಿ ಇರುವ ಸಚಿವ ಸ್ಥಾನ ಮಾತ್ರ ಭರ್ತಿ ಮಾಡಿದ್ದು ಪುನರಚನೆ ಮಾಡಿಲ್ಲ. ವರಿಷ್ಟರು ತೀರ್ಮಾನ ಮಾಡಿದರೆ ಸರ್ಕಾರದ ಹಿತ ದೃಷ್ಟಿಯಿಂದ ಸಚಿವ ಸ್ಥಾನ ಬಿಟ್ಟುಕೊಡಲು ನಾವೂ ಸಿದ್ದ’ ಎಂದರು.
‘ಬಿಜೆಪಿಯವರು ಸರ್ಕಾರ ಬೀಳಿಸಲು ಎಷ್ಟೇ ಪ್ರಯತ್ನಪಟ್ಟರು, ಸಾಧನೆ ಮಾಡಲು ಸಾಧ್ಯವಿಲ್ಲ. ಬಿಜೆಪಿ ಮುಖಂಡರದ್ದು ಎಲ್ಲ ವಿಫಲ ಪ್ರಯತ್ನಗಳೇ’ ಎಂದು ಆರೋಪಿಸಿದರು.