ಕೆಜಿಎಫ್: ಬಿಜಿಎಂಎಲ್ನ ನ್ಯೂ ಟೇಲರ್ ಶಾಫ್ಟ್ನಲ್ಲಿ ಬೆಳೆದಿದ್ದ ಬೃಹತ್ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಲಾಗಿದ್ದು, ಈ ಸಂಬಂಧ ಭದ್ರತಾ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ರಕ್ಷಣಾ ವೇದಿಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದೆ.
ಬಿಜಿಎಂಎಲ್ ಪ್ರದೇಶದಲ್ಲಿ ಹಲವಾರು ಶ್ರೀಗಂಧದ ಮರಗಳು ಬೆಳೆದಿವೆ. ಅವುಗಳನ್ನು ವ್ಯವಸ್ಥಿತ ರೀತಿಯಲ್ಲಿ ಕಳ್ಳತನ ಮಾಡಲಾಗುತ್ತಿದೆ. ಬಿಜಿಎಂಎಲ್ ಭದ್ರತಾ ಪ್ರದೇಶವಾಗಿದ್ದು, ಸದಾ ಸಿಬ್ಬಂದಿಯ ಕಾವಲು ಇರುತ್ತದೆ. ಇಂತಹ ಪ್ರದೇಶದಲ್ಲಿಯೇ ಮರಗಳ ಕಳ್ಳತನವಾಗಿದ್ದು ಭದ್ರತಾ ಸಿಬ್ಬಂದಿಯ ಕೈವಾಡ ಇರುವ ಶಂಕೆ ಇದೆ.
ಕಳ್ಳತನದ ಬಗ್ಗೆ ಪೊಲೀಸರಿಗೆ ದೂರು ಕೊಡದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ನಿಟ್ಟಿನಲ್ಲಿ ಮುಖ್ಯ ಭದ್ರತಾ ಅಧಿಕಾರಿ, ಸೂಪರ್ ವೈಸರ್ ಮತ್ತು ಗುತ್ತಿಗೆ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಬೇಕು. ಕೇಂದ್ರ ಸರ್ಕಾರದ ಆಸ್ತಿಯನ್ನು ಕಾಪಾಡಬೇಕು ಎಂದು ವೇದಿಕೆಯ ಅಧ್ಯಕ್ಷ ಅನ್ಬರಸನ್ ಕೋರಿದ್ದಾರೆ.