ಕೋಲಾರ: ‘ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಲು ಎಸ್ಡಿಎಂಸಿ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಪಾತ್ರ ನಿರ್ಣಾಯಕ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ಗೌಡ ಅಭಿಪ್ರಾಯಪಟ್ಟರು.
ತಾಲ್ಲೂಕಿನ ವಿಟ್ಟಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
‘ವಿಟ್ಟಪ್ಪನಹಳ್ಳಿ ಶಾಲೆ ಆವರಣವು 4 ಎಕರೆ ವಿಸ್ತಾರವಾಗಿದೆ. ಶಾಲೆ ಆವರಣದಲ್ಲಿ ವಿವಿಧ ಬಗೆಯ ಸಸಿಗಳನ್ನು ಬೆಳಸಲಾಗಿದ್ದು, ಉಳಿದ ಜಾಗದಲ್ಲಿ ಮಾವಿನ ಸಸಿಗಳನ್ನು ನೆಡಬೇಕು. ಶಿಕ್ಷಕರು ಮಕ್ಕಳಲ್ಲಿ ಕನ್ನಡ ಭಾಷೆ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಸೂಚಿಸಿದರು.
ಈಗಾಗಲೇ ಶಾಲೆಗೆ ಗ್ರಾ.ಪಂ ವತಿಯಿಂದ ಬಯಲು ರಂಗಮಂದಿರ, ಶೌಚಾಲಯ, ಕಾಂಪೌಂಡ್, ಸಿ.ಸಿ.ರಸ್ತೆ, ಗ್ರಂಥಾಲಯ ಮತ್ತು ಕಂಪ್ಯೂಟರ್ ಕೇಂದ್ರ, ಅಡುಗೆ ಕೊಠಡಿ ಸೌಕರ್ಯ ಕಲ್ಪಿಸಲಾಗಿದೆ. ಶಾಲೆಯಲ್ಲಿ ಮೂಲಸೌಕರ್ಯ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.
ಎಸ್ಡಿಎಂಸಿ ಅಧ್ಯಕ್ಷ ಶ್ರೀನಿವಾಸ್, ಇಸಿಒ ವೆಂಕಟಾಚಲಪತಿ, ಬಿಆರ್ಪಿ ನಾಗರಾಜ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ರಾಮಕೃಷ್ಣಪ್ಪ, ಶಿಕ್ಷಕರಾದ ಅಶ್ವತ್ಥ ನಾರಾಯಣ, ರಾಜೇಶ್, ಸುಜಾತಾ ಹಾಜರಿದ್ದರು.