ಕೋಲಾರ: ಗ್ಲೋಬ್ ಐ ಪ್ರತಿಷ್ಠಾನ, ಭಾರತೀಯ ದಲಿತ ಒಕ್ಕೂಟ ಹಾಗೂ ಫಿಡಿಲಿಟಿ ಸಂಸ್ಥೆ ಸಹಯೋಗದಲ್ಲಿ ನಗರದ ಗಾಂಧಿನಗರದಲ್ಲಿ ಬುಧವಾರ ವಯೋವೃದ್ಧರಿಗೆ ಉಚಿತವಾಗಿ ಕಣ್ಣು ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರ ನಡೆಸಲಾಯಿತು.
ಮುಳಬಾಗಿಲು, ಬಂಗಾರಪೇಟೆ, ಕೋಲಾರ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ಗ್ರಾಮೀಣ ಪ್ರದೇಶದ ವೃದ್ಧರು ಶಿಬಿರದಲ್ಲಿ ಕಣ್ಣು ತಪಾಸಣೆ ಮಾಡಿಸಿಕೊಂಡರು.
‘ಶಿಬಿರದಲ್ಲಿ ಸುಮಾರು 100 ಮಂದಿಯ ಕಣ್ಣು ತಪಾಸಣೆ ಮಾಡಲಾಗಿದ್ದು, ಇವರ ಶಸ್ತ್ರಚಿಕಿತ್ಸೆ ವೆಚ್ಚವನ್ನು ಸಂಸ್ಥೆಯೇ ಭರಿಸಲಿದೆ, ಸಂಸ್ಥೆಯು ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ, ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆ ಮಾಡುತ್ತಿದೆ’ ಎಂದು ಅಮೆರಿಕದ ಫಿಡಿಲಿಟಿ ಸಂಸ್ಥೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆ್ಯಂಡಿ ಗಿಡ್ಡಿಂಗ್ಸ್ ಹೇಳಿದರು.
‘ಸಂಸ್ಥೆಯು ವೃದ್ಧರ ಆರೋಗ್ಯ ಕಾಳಜಿಯಿಂದ ಮಧುಮೇಹ ತಪಾಸಣೆ ಹಾಗೂ ಕಣ್ಣಿನ ಶಸ್ತ್ರಚಿಕಿತ್ಸೆಗೆ ಹಣಕಾಸು ನೆರವು ನೀಡುತ್ತಿದೆ’ ಎಂದು ತಿಳಿಸಿದರು.
ಶಿಬಿರದಲ್ಲಿ 164 ಮಂದಿ ಕಣ್ಣು ತಪಾಸಣೆ ಮಾಡಿಸಿಕೊಂಡರು. ಈ ಪೈಕಿ 152 ಜನರಲ್ಲಿ ದೃಷ್ಟಿ ದೋಷ ಪತ್ತೆಯಾಯಿತು. 35 ಮಂದಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಉಳಿದವರು ಮಧುಮೇಹ ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಶಸ್ತ್ರಚಿಕಿತ್ಸೆ ಮಾಡದೆ ಉಚಿತವಾಗಿ ಔಷಧ ಮತ್ತು ಮಾತ್ರೆ ನೀಡಲಾಯಿತು.