ಕೋಲಾರ: ‘ಯಾವುದೇ ವಿಷಯವನ್ನು ವಿದ್ಯಾರ್ಥಿಗಳು ಇಷ್ಟಪಟ್ಟು ಕಲಿತಾಗ ಉತ್ತಮ ಫಲಿತಾಂಶಗಳಿಸಬಹುದು’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ತಿಳಿಸಿದರು.
ಇಲ್ಲಿನ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದ ಗಣಿತ ಶಾಸ್ತ್ರ ವಿಭಾಗದಿಂದ ಶುಕ್ರವಾರ ಆಯೋಜಿಸಿದ್ದ ಕಲಿಕಾ ಪ್ರೇರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಗಣಿತವೆಂದರೆ ಕಬ್ಬಿಣದ ಕಡಲೆ ಎಂಬ ಭಾವನೆಯಿದೆ. ಸರಳವಾಗಿ ಆರ್ಥೈಸಿಕೊಂಡರೆ ಯಾವುದು ಕಠಿಣವೆನಿಸುವುದಿಲ್ಲ’ ಎಂದರು.
‘ಜಿಲ್ಲೆಯಲ್ಲಿ ಹೆಚ್ಚು ಮಂದಿ ವಿದ್ಯಾರ್ಥಿಗಳು ಬಿಎಸ್ಸಿಗೆ ದಾಖಲಾಗುತ್ತಿದ್ದಾರೆ. ಅದಕ್ಕೆ ತಕ್ಕಂತೆ ಗುಣಮಟ್ಟದ ಶಿಕ್ಷಣ ನೀಡಲು ವಿಶ್ವ ವಿದ್ಯಾಲಯ ತಯಾರಿ ನಡೆಸಿಕೊಂಡಿದೆ. ಈ ಭಾಗದ ಜನರ ಅದೃಷ್ಟವೆಂಬಂತೆ ಇಲ್ಲಿ ವಿಶ್ವ ವಿದ್ಯಾಲಯ ಆರಂಭವಾಗಿದೆ. ಇಲ್ಲಿಂದ ಸಾಧಕರು ದೇಶಕ್ಕೆ ಕೊಡುಗೆಯಾಗಿ ಸಿಗುವಂತಾಗಬೇಕು’ ಎಂದು ಹೇಳಿದರು.
‘ವಿದ್ಯಾರ್ಥಿಗಳ ಸಾಧನೆಯಿಂದ ವಿಶ್ವವಿದ್ಯಾಲಯದ ಕೀರ್ತಿ ಹೆಚ್ಚುತ್ತದೆ. ಅಂತಹ ಸಾಧನೆ ನಿಮ್ಮಿಂದ ನಿರೀಕ್ಷಿಸಿದ್ದೇನೆ. ಅತಿ ಹೆಚ್ಚು ರ್ಯಾಂಕ್ಗಳಿಸುವ ಮೂಲಕ ಘನತೆ ಹೆಚ್ಚಿಸಬೇಕು’ ಎಂದು ಸಲಹೆ ನೀಡಿದರು.
ಗಣಿತ ಶಾಸ್ತ್ರ ವಿಭಾಗದ ಸಂಯೋಜಕಿ ಸಿ.ಎಸ್.ಶ್ರೀಲತಾ ಮಾತನಾಡಿ, ‘ಗಣಿತವನ್ನು ಪದವಿಯೊಂದರಲ್ಲಿ ಒಂದು ವಿಷಯವಾಗಿ ತೆಗೆದುಕೊಳ್ಳಲು ವಿದ್ಯಾರ್ಥಿಗಳು ಹೆದರುವುದನ್ನು ಕಂಡಿದ್ದೇವೆ. ಅದೇ ವಿಷಯವನ್ನು ಮುಖ್ಯ ವಿಷಯವಾಗಿ ತೆಗೆದುಕೊಂಡಿರುವುದು ಖುಷಿ ತಂದಿದೆ’ ಎಂದು ತಿಳಿಸಿದರು.
‘ಯಾವುದೇ ವಿಷಯದಲ್ಲಿ ಹೆಚ್ಚು ಅಂಕಗಳಿಸಬೇಕಾದರೆ ಸುಲಭದ ಮಾರ್ಗಗಳನ್ನು ಅನುಸರಿಸಬೇಕು. ಇದು ನನಗೆ ಕಷ್ಟು ಎಂಬ ಭಾವನೆಯನ್ನು ದೂರ ಮಾಡಬೇಕು’ ಎಂದು ಸಲಹೆ ನೀಡಿದರು.
ವಾಣಿಜ್ಯ ವಿಭಾಗದ ಸಂಯೋಜಕಿ ಭಾನುಪ್ರಿಯಾ, ಉಪನ್ಯಾಸಕರಾದ ಇಮ್ರಾನ್ ಖಾನ್, ಶಿವರಾಜ್, ವಿಶಾಲಾಕ್ಷಿ, ಅಫ್ಸರ್ ಹಾಜರಿದ್ದರು.