ಕೋಲಾರ: ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ತಾಲ್ಲೂಕಿನ ಬಣಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಬುಧವಾರ ಶಿಲಾನ್ಯಾಸ ನೆರವೇರಿಸಿದರು.
‘ತಾಲ್ಲೂಕಿನೆಲ್ಲೆಡೆ ಎಲ್ಲಾ ಹಾಲು ಸಹಕಾರ ಸಂಘಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಬಣಕನಹಳ್ಳಿಯ ನೂತನ ಕಟ್ಟಡ ನಿರ್ಮಾಣಕ್ಕೆ ಒಕ್ಕೂಟದಿಂದ ₹ 3 ಲಕ್ಷ ಮತ್ತು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ₹ 1 ಲಕ್ಷ ನೀಡಲಾಗುತ್ತದೆ’ ಎಂದು ಹರೀಶ್ ಹೇಳಿದರು.
‘ಹಾಲು ಒಕ್ಕೂಟದಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ರೈತರು ಸ್ವಾವಲಂಬಿಗಳಾಗಬೇಕು. ಉತ್ಪಾದಕರ ಮತ್ತು ಸಂಘದ ಹಿತದೃಷ್ಟಿಯಿಂದ ಹಾಲು ಶೇಖರಣೆ ಹಾಗೂ ಹಾಲಿನ ಗುಣಮಟ್ಟ ಉತ್ತಮಪಡಿಸಬೇಕು. ಸಂಘಕ್ಕೆ ಮುಂದೆ ಕಂಪ್ಯೂಟರ್ ನೀಡಲಾಗುವುದು’ ಎಂದು ತಿಳಿಸಿದರು.
ಕೋಚಿಮುಲ್ ತಾಲ್ಲೂಕು ಉಪ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ, ಸಂಘದ ಅಧ್ಯಕ್ಷ ಸೋಮೇಗೌಡ, ಕಾರ್ಯದರ್ಶಿ ದೇವೇಗೌಡ, ವಿಸ್ತರಣಾಧಿಕಾರಿಗಳಾದ ಶ್ರೀನಿವಾಸ್, ಎಸ್.ರಾಮಾಂಜಿನಪ್ಪ ಹಾಜರಿದ್ದರು.