ಕೆಜಿಎಫ್: ಕುಡಿಯುವ ನೀರಿನ ಬವಣೆ ತಪ್ಪಿಸಲು ಹೆಚ್ಚಿನ ನೀರಿನ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿ ಕೀರ್ತಿಕೊಪ್ಪ ಗ್ರಾಮದ ಜನ ಬುಧವಾರ ಮಾರಿಕುಪ್ಪಂ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಧರಣಿ ನಡೆಸಿದರು.
ಗ್ರಾಮದಲ್ಲಿ ಖಾಸಗಿ ಕೊಳವೆಬಾವಿಯಿಂದ ನೀರು ಸರಬರಾಜು ಆಗುತ್ತಿದೆ. ಕೇವಲ ಎರಡು ಗಂಟೆ ನೀರು ನೀಡಲಾಗುತ್ತಿದೆ. ಇಡೀ ಗ್ರಾಮದ ಜನತೆಗೆ ಇದು ಸಾಕಾಗುತ್ತಿಲ್ಲ. ಹೆಚ್ಚುವರಿ ಸಮಯ ನೀರು ಕೊಡಿಸಬೇಕು ಎಂದು ಒತ್ತಾಯಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಶವಂತ್, ‘ಗ್ರಾಮದಲ್ಲಿ ಸರ್ಕಾರಿ ಕೊಳವೆಬಾವಿ ವಿಫಲವಾಗಿರುವುದರಿಂದ ಖಾಸಗಿ ಕೊಳವೆಬಾವಿಯಿಂದ ನೀರು ನೀಡಲಾಗುತ್ತಿದೆ. ಬೇಸಿಗೆ ಬಿಸಿಲಿನಿಂದ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂದು ಖಾಸಗಿ ಬೋರ್ವೆಲ್ ಮಾಲೀಕರು ತಿಳಿಸಿದ್ದಾರೆ. ಆದ್ದರಿಂದ ಸರ್ಕಾರಿ ಕೊಳವೆಬಾವಿ ಸಿದ್ಧವಾಗುವ ತನಕ ಗ್ರಾಮಸ್ಥರು ನೀರಿನ ಮಿತವ್ಯಯ ಮಾಡಬೇಕು’ ಎಂದು ಹೇಳಿದರು.
ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬಹುದು. ಆದರೆ, ನೀರಿನ ಪ್ರಮಾಣ ಕಡಿಮೆ ಇರುತ್ತದೆ. ಆದ್ದರಿಂದ ಖಾಸಗಿ ಕೊಳವೆಬಾವಿಯಿಂದ ನೀರು ಪಡೆಯುವುದು ಉತ್ತಮ. ಗ್ರಾಮಸ್ಥರು ಟ್ಯಾಂಕರ್ ಮೂಲಕವೇ ಬೇಕು ಎನ್ನುವುದಾದರೆ ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.
ಖಾಸಗಿ ಕೊಳವೆಬಾವಿಯಿಂದಲೇ ನೀರು ಪಡೆಯುವುದು ಉತ್ತಮ. ಇನ್ನೂ ಹೆಚ್ಚಿನ ಸಮಯ ನೀರು ಪೂರೈಸಲು ಸೂಚಿಸಬೇಕು ಎಂದು ಗ್ರಾಮಸ್ಥರು ಕೋರಿದರು.
ಗ್ರಾಮದ ಮುಖಂಡರಾದ ರಾಮಕೃಷ್ಣಪ್ಪ, ವೆಂಕಟೇಶಪ್ಪ, ವೆಂಕಟಲಕ್ಷ್ಮಮ್ಮ, ಲೀಲಾವತಿ, ಪಾರ್ವತಮ್ಮ, ಗೌರಮ್ಮ, ಆಂಜಮ್ಮ, ಶ್ರೀನಾಥ್, ವೆಂಕಟೇಶಪ್ಪ ಇದ್ದರು.