ಮಾಲೂರು (ಕೋಲಾರ): ಪಟ್ಟಣದ ಮಾರುತಿ ಬಡಾವಣೆ ನಿವಾಸಿ, ಇಟ್ಟಿಗೆ ಕಾರ್ಖಾನೆ ಮಾಲೀಕ ಟಿಂಬರ್ ಬಾಬು (63) ಎಂಬವರನ್ನು ದುಷ್ಕರ್ಮಿಗಳು ಅಪಹರಿಸಿ ₹5 ಕೋಟಿಗೆ ಬೇಡಿಕೆ ಇಟ್ಟಿರುವುದು ಗೊತ್ತಾಗಿದೆ.
ಮಾಲೂರು- ತೋರನಹಳ್ಳಿ ರಸ್ತೆಯ ಹೆಡಗಿನ ಬೆಲೆ ಗೇಟ್ ಬಳಿ ಇರುವ ಅವರ ಇಟ್ಟಿಗೆ ಕಾರ್ಖಾನೆ ಬಳಿ ಬುಧವಾರ ಬೆಳಿಗ್ಗೆ 11.30ಕ್ಕೆ ಅಪಹರಣ ನಡೆದಿದೆ ಎಂದು ಪಟ್ಟಣದ ಠಾಣೆಯಲ್ಲಿ ದೂರು ದಾಖಲಾಗಿದೆ.
‘ಟಿಂಬರ್ ಬಾಬು ಎಂದಿನಂತೆ ಇಟ್ಟಿಗೆ ಕಾರ್ಖಾನೆಗೆ ಹೋಗುತ್ತಿದ್ದರು. ಕಾರಿನಲ್ಲಿ ಬಂದ ಅಪರಿಚಿತರು ಅವರನ್ನು ಅಡ್ಡಗಟ್ಟಿ ಈ ಕೃತ್ಯ ಎಸಗಿದ್ದಾರೆ’ ಎಂದು ಬಾಬು ಅವರ ಪುತ್ರ ಮಂಜುನಾಥ್ ದೂರಿನಲ್ಲಿ ತಿಳಿಸಿದ್ದಾರೆ.
ಗುರುವಾರ ಬೆಳಿಗ್ಗೆ ಬಾಬು ಅವರ ಮೊಬೈಲ್ನಿಂದ ಕರೆ ಮಾಡಿರುವ ದುಷ್ಕರ್ಮಿಗಳು, ₹5 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮೂರು ತಂಡಗಳನ್ನು ರಚಿಸಿಕೊಂಡು ಶೋಧಕಾರ್ಯ ಕೈಗೊಂಡಿದ್ದಾರೆ.