ಖಾಸಗಿ ಶಾಲಾ ಮಾನ್ಯತೆ ನವೀಕರಣಕ್ಕೆ ಲಂಚದ ಬೇಡಿಕೆ
ಕೆಜಿಎಫ್: ಖಾಸಗಿ ಶಾಲೆಯೊಂದರ ವಾರ್ಷಿಕ ಮಾನ್ಯತೆ ನವೀಕರಣಕ್ಕೆ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧಿಕಾರಿಯೊಬ್ಬರು ಲಂಚ ಕೇಳಿದ್ದಾರೆ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಸಂಬಂಧ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಕೃಷ್ಣಮೂರ್ತಿ ಅವರು ಅಧಿಕಾರಿಗೆ ನೋಟಿಸ್ ನೀಡಿದ್ದಾರೆ.
ಖಾಸಗಿ ಶಾಲೆಯೊಂದರ ಮುಖ್ಯಸ್ಥರೊಡನೆ ಈ ಸಂಭಾಷಣೆ ನಡೆಸಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನೀಡಬೇಕಾದ ಲಂಚದ ಮೊತ್ತವನ್ನು ಅಧಿಕಾರಿ ತಿಳಿಸಿದ್ದಾರೆ. ಖಾಸಗಿ ಶಾಲೆಯ ವಾರ್ಷಿಕ ನವೀಕರಣ ಸಂಬಂಧ ಈ ಸಂಭಾಷಣೆ ನಡೆದಿರುವುದು ಗೊತ್ತಾಗಿದೆ.
‘ಉಪ ನಿರ್ದೇಶಕರ ಕಚೇರಿಯಲ್ಲಿ ಎಷ್ಟು ಕೊಡಬೇಕು? ನವೀಕರಣದ ಗುಮಾಸ್ತನಿಗೆ ಹೇಗೆ ಹಣ ಕೊಡಬೇಕು? ಅದರಲ್ಲಿ ತನ್ನ ಪಾತ್ರವೇನು?’ ಎಂದು ಸಂಭಾಷಣೆಯಲ್ಲಿ ತೊಡಗಿದ ಅಧಿಕಾರಿ
ಹೇಳುತ್ತಾರೆ.
‘ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಮನ್ವಯ ಅಧಿಕಾರಿ (ಇಸಿಒ) ಗಂಗಿರೆಡ್ಡಿ ಧ್ವನಿ ಇರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಖಾಸಗಿ ಶಾಲೆಯ ಮಾನ್ಯತೆ ನವೀಕರಣಕ್ಕೆ ಹಣ ಕೇಳಿರುವುದು ಆಡಿಯೊದಲ್ಲಿದೆ. ಈ ಸಂಬಂಧ ಬಿಇಒ ಮೂಲಕವೇ ನೋಟಿಸ್ ಕೊಡಿಸಿದ್ದು, ಸೋಮವಾರದೊಳಗೆ ಉತ್ತರ ನೀಡಲು ಹೇಳಿದ್ದೇನೆ. ಇನ್ನೊಂದು ಬದಿಯಿಂದ ಸಂಭಾಷಣೆ ನಡೆಸಿದ ಖಾಸಗಿ ಶಾಲೆಯ ವ್ಯಕ್ತಿ ಯಾರು ಎಂಬುದು ಗೊತ್ತಾಗಿಲ್ಲ’ ಎಂದು ಇಲಾಖೆಯ ಉಪ ನಿರ್ದೇಶಕ ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.