ನಂಗಲಿ: ಸತತವಾಗಿ ಬೀಳುತ್ತಿರುವ ಭಾರಿ ಮಳೆಗೆ ಕೆರೆಗಳು ತುಂಬಿ ಹರಿಯುತ್ತಿವೆ. ಕೋಡಿಯಲ್ಲಿ ಗ್ರಾಮಸ್ಥರು ಮೀನು ಶಿಕಾರಿ ನಡೆಸಿ ಸಂಭ್ರಮಿಸಿದರೆ, ಮೀನು ಹರಾಜುದಾರರು ನಷ್ಟದ ಭೀತಿಯಿಂದ ಕಂಗಲಾಗಿದ್ದಾರೆ.
ವರ್ಷದ ಹಿಂದೆ ಬಿದ್ದ ಮಳೆಗಳಿಗೆ ಕೆರೆ ತುಂಬಿ ಕೋಡಿ ಹರಿದಿದ್ದವು. ಜಿಲ್ಲಾಧಿಕಾರಿ ಆದೇಶದಂತೆ ಕೆರೆಗಳ ನೀರನ್ನು ಕೃಷಿ ಅಥವಾ ಯಾವುದೇ ಚಟುವಟಿಕೆಗಳಿಗಳಿಗೆ ಕೆರೆ ನೀರು ಬಳಸಬಾರದು ಎಂದು ತೂಬುಗಳನ್ನು ಮುಚ್ಚಲಾಗಿತ್ತು. ಈಗ ಸತತ ಸುರಿಯುತ್ತಿರುವ ಮಳೆಗೆ ಕೆರೆಗಳು ಕೋಡಿ ಹರಿಯುತ್ತಿದೆ.
ಮುಷ್ಟೂರು ಮರವೇಮನೆ ಕೆರೆ, ನಂಗಲಿ, ಮಲ್ಲೆಕುಪ್ಪ ಮತ್ತು ನಗವಾರ ಕೆರೆ ವರ್ಷದಲ್ಲಿ ಎರಡನೇ ಬಾರಿಗೆ ಕೋಡಿ ಹರಿಯುತ್ತಿದೆ. ಜನ ತಂಡೋಪತಂಡವಾಗಿ ಕೆರೆಕೋಡಿಯನ್ನುಕಣ್ತುಂಬಿಕೊಳ್ಳುತ್ತಿದ್ದಾರೆ. ಜತೆಗೆ ಮೀನು ಬೇಟೆ ನಡೆಸಿ ಖುಷಿ ಪಡುತ್ತಿದ್ದಾರೆ.
ಕೋಡಿಯಲ್ಲಿ ಬರುತ್ತಿರುವ ಮೀನುಗಳನ್ನು ಹಿಡಿಯಲು ಮುಗಿ ಬೀಳುತ್ತಿದ್ದಾರೆ. ಕೆಲವರು ಕೈಗಳಲ್ಲಿಯೇ ಮೀನುಗಳನ್ನು ಹಿಡಿದರೆ, ಮತ್ತೆ ಕೆಲವರು ರೇಷ್ಮೆ ಬಲೆ, ಮೀನು ಬಲೆಗಳಲ್ಲಿ ಮತ್ತೆ ಕೆಲವರು ಟೊಮೆಟೊ ಬಾಕ್ಸ್ಗಳಲ್ಲಿ ಮೀನು ಹಿಡಿಯುತ್ತಿದ್ದಾರೆ.
ವರ್ಷದ ಹಿಂದೆ ಕೆರೆಗಳು ತುಂಬಿದ್ದರಿಂದ ಹರಾಜುದಾರರು ಎಲ್ಲಾ ಕೆರೆಗಳಲ್ಲಿ ಮೀನು ಮರಿ ಬಿಟ್ಟಿದ್ದರು. ಈಗ ಅವು ದೊಡ್ಡದಾಗಿವೆ. ಆದರೆ ಏಕಾಏಕಿ ಭಾರಿ ಮಳೆ ಸುರಿದ ಕಾರಣ ಮೀನುಗಳು ಕೋಡಿಯಲ್ಲಿ ಕೊಚ್ಚಿ ಹೋಗುತ್ತಿರುವುದು ಹರಾಜುದಾರರಲ್ಲಿ ನಷ್ಟದ ಭೀತಿ ಹುಟ್ಟಿಸಿದೆ.
ಲಕ್ಷಾಂತರ ರೂಪಾಯಿ ವ್ಯಹ ಮಾಡಿ ಮೀನು ಹರಾಜು ಕೂಗಿರುವವರು ಕೋಡಿಯಲ್ಲಿ ಮೀನು ಕೊಚ್ಚಿ ಹೋಗುತ್ತಿರುವ ನೋಡಿ ಕೊರಗುವಂತಾಗಿದೆ. ಇದರಿಂದ ಕೆಲವರು ಕೆರೆ ಕೋಡಿಗಳ ಮೇಲೆ ಮೀನುಗಳು ಕೆರೆಗಳಿಂದ ಆಚೆ ಬಾರದಂತೆ ಬಲೆ ಮತ್ತು ಜಾಲರಿ ಅಳವಡಿಸಿದ್ದಾರೆ.