ಮಾಲೂರು: ತಾಲ್ಲೂಕಿನ ಬಂಟಹಳ್ಳಿಯ ಯುವ ರೈತ ಶ್ರೀನಿವಾಸ ರೆಡ್ಡಿ ಒಂದು ಎಕರೆ ಭೂಮಿಯಲ್ಲಿ ಕಡಿಮೆ ಬಂಡವಾಳ ಹಾಗೂ ನೀರನ್ನು ಬಳಸಿ ಶತಾವರಿ (ಆಸ್ಪರೇಗಸ್) ಬೆಳೆ ತೆಗೆದು ಮಾದರಿ ರೈತ ಎನಿಸಿಕೊಂಡಿದ್ದಾನೆ.
ಪದವೀಧರರಾಗಿರುವ ಶ್ರೀನಿವಾಸ ರೆಡ್ಡಿ ತಮ್ಮ ಭೂಮಿಯಲ್ಲಿ ವಾಣಿಜ್ಯ ಬೆಳೆಗಳಾದ ಆಲೂಗಡ್ಡೆ , ಕ್ಯಾರೆಟ್, ಬಿಟ್ರೋಟ್, ಕ್ಯಾಪ್ಸಿಕಂ ಬೆಳೆ ಬೆಳೆಯುತ್ತಿದ್ದರು. ವಿದ್ಯುತ್, ಮಾರುಕಟ್ಟೆ ಸಮಸ್ಯೆ ಜತೆಗೆ ಬೆಲೆ ಸಿಗದಿರುವುದು ಇದರಿಂದ ಬೇಸತ್ತ ಅವರು ಹೊಸ ಬೆಳೆಯತ್ತ ಮುಖ ಮಾಡಿದರು. ಆಗ ಅವರಿಗೆ ಹೊಳೆದಿದ್ದೇ ಶತಾವರಿ. ಅದನ್ನು ಬೆಳೆದು ಹೆಚ್ಚು ಲಾಭ ಗಳಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಬಂಟಹಳ್ಳಿ ತಮಿಳುನಾಡಿನ ಗಡಿಗೆ ಅಂಟಿಕೊಂಡಿದ್ದು, ಶ್ರೀನಿವಾಸ ರೆಡ್ಡಿ ಹೊಸೂರಿನ ತನ್ನ ಸ್ನೆಹಿತ ಶಂಕರ್ ಬಳಿ ಬೆಳೆಗಳ ಬಗ್ಗೆ ಚರ್ಚಿಸುವ ಸಂದರ್ಭದಲ್ಲಿ ಶತಾವರಿ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ನಂತರ ತಮ್ಮ ಒಂದು ಎಕರೆಯಲ್ಲಿ ಶತಾವರಿ ಬೆಳೆ ನಾಟಿ ಮಾಡಲು ನಿರ್ಧರಿಸಿ, 400 ರಿಂದ 600 ಬೀಜ ಖರೀದಿಸಿದರು. ಮಣ್ಣಿನಿಂದ ಹರಡುವ ರೋಗ ಮತ್ತು ಕೀಟಗಳಿಂದ ಬೆಳೆ ರಕ್ಷಿಸಿಕೊಳ್ಳಲು ಬಿತ್ತನೆ ಮಾಡುವ ಮೊದಲು ಬೀಜಗಳನ್ನು 24 ಗಂಟೆ ಗೋಮೂತ್ರದಲ್ಲಿ ನೆನೆಸಿ ಬೀಜ ಸಂಸ್ಕರಣೆ ಮಾಡಿ ನಂತರ ಬೀಜಗಳನ್ನು ನರ್ಸರಿ ಹಾಸಿಗೆಗಳಲ್ಲಿ ಬಿತ್ತನೆ ಮಾಡಿದರು. ತೇವಾಂಶ ಉಳಿಸಿಕೊಳ್ಳಲು ತೆಳುವಾದ ಬಟ್ಟೆಯಿಂದ ಹಾಸಿಯನ್ನು ಮುಚ್ಚಿದ್ದರು.
ಸಸಿ ಮೊಳಕೆ 45 ಸೆ.ಮೀ ಬಂದಾಗ 60/60 ಸೆಂ.ಮೀ ಅಳತೆಯಲ್ಲಿ ನಾಟಿ ಮಾಡಲಾಯಿತು. ನಂತರ ಸಸಿಗಳಿಗೆ ಹನಿ ನೀರಾವರಿ ಮೂಲಕ ನೀರು ಉಣಿಸಲಾಯಿತು. ಕೊಯ್ಲು ಮಾಡುವ ಮೊದಲು ನೀರು ಉಣಿಸಿದರೆ ಬೇರು ಅಗೆಯಲು ಸುಲಭವಾಗುತ್ತದೆ.
ಮಾರುಕಟ್ಟೆ: ಶತಾವರಿ ಒಂದು ಆಯುರ್ವೇದದ ಮೂಲಿಕೆಯಾಗಿದ್ದು, ಔಷಧಿ ಗುಣಗಳನ್ನು ಹೊಂದಿರುವುದರಿಂದ ಹೆಚ್ಚು ಬೇಡಿಕೆಯಿದೆ. ಶತಾವರಿ ಗಿಡ ಒಂದು ದಿನಕ್ಕೆ 12 ಇಂಚು ಬೆಳೆಯುತ್ತದೆ. ಪ್ರತಿನಿತ್ಯ ಬೆಳೆಯನ್ನು ಕಟಾವು ಮಾಡಬಹುದು. ಉತ್ತಮ ಗುಣಮಟ್ಟದ 1 ಕೆ.ಜಿ ಶತಾವರಿ ₹200ಕ್ಕೆ ಮಾರಾಟವಾಗುತ್ತದೆ. ಕಡಿಮೆ ಗುಣಮಟ್ಟದ್ದು, ₹80 ರಿಂದ 40ರವರೆಗೆ ಹೊಸೂರು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತದೆ. ಕೆಲವೊಮ್ಮೆ ವ್ಯಾಪಾರಗಾರರು ತೋಟದ ಬಳಿ ಬಂದು ಖರೀದಿಸುತ್ತಾರೆ. ಹಾಗಾಗಿ ಶ್ರೀನಿವಾಸ ರೆಡ್ಡಿ ಅವರು ವಾಣಿಜ್ಯ ಬೆಳೆ ಬೆಳೆದು ಕೈ ಸುಟ್ಟುಕೊಳ್ಳುವುದಕ್ಕಿಂತ ಶತಾವರಿ ಅಂತಹ ಉತ್ತಮ ಬೆಳೆ ಬೆಳೆದು ಲಾಭ ಗಳಿಸಿ ಎಂದು ರೈತರಿಗೆ ಕಿವಿಮಾತು ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.