ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲೂರು | ಮಳೆ ಕೊರತೆ: ಡಚ್ ರೋಸ್‌, ಸೇವಂತಿ ಬೆಳೆಗೆ ಮೊರೆ ಹೋದ ಬೆಳೆಗಾರರು

Published 4 ಜನವರಿ 2024, 5:16 IST
Last Updated 4 ಜನವರಿ 2024, 5:16 IST
ಅಕ್ಷರ ಗಾತ್ರ

ಮಾಲೂರು: ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆ ಎದುರಿಸುತ್ತಿರುವ ತಾಲ್ಲೂಕಿನ ಬಹಳಷ್ಟು ರೈತರು ಹೂ ಬೆಳೆಯುವತ್ತ ಗಮನ ಹರಿಸಿದ್ದಾರೆ. ಅದರಲ್ಲೂ ವಾಣಿಜ್ಯ ಬೆಳೆಯಾಗಿರುವ ಹೂ ಬೆಳೆ ಈಗ ಬಹುತೇಕರ ಆಯ್ಕೆಯಾಗಿದೆ.

ಮಳೆಯಾಶ್ರಯದಲ್ಲಿ ಸಾಂಪ್ರ ದಾಯಿಕ ಕೃಷಿ ನಡೆಸುವುದು ಈಗ ನಷ್ಟದ ಬಾಬತ್ತಾಗಿದ್ದು, ಉತ್ತು, ಬಿತ್ತು ಮಳೆಗಾಗಿ ಕಾಯುವುದು ಕಷ್ಟವೂ ಹೌದು. ಇದೇ ಸಂದರ್ಭದಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅನುಸರಿಸಿ ವಾಣಿಜ್ಯೇತರ ಬೆಳೆಗಳನ್ನು ಬೆಳೆಯುವುದರಿಂದಲೂ ಪ್ರಯೋಜನ ಕಡಿಮೆ ಎಂಬುದು ಇಲ್ಲಿನ ರೈತರ ನಿಲುವು. ಹೀಗಾಗಿ ಅದೇ ಹನಿ ನೀರಾವರಿ ಪದ್ಧತಿಯಲ್ಲೇ ವಾಣಿಜ್ಯ ಪುಷ್ಪಕೃಷಿಯತ್ತ ಹೆಚ್ಚು ಮಂದಿ ಗಮನ ಹರಿಸಿದ್ದಾರೆ.

ತಾಲ್ಲೂಕಿನ ಲಕ್ಕೂರು, ಪುರ, ಕೋಡಳ್ಳಿ, ಕೊಡುರು, ಜಗದೇನಹಳ್ಳಿ, ಜಯಮಂಗಲ, ಸಂಪಂಗೇರೆ, ಮಾಸ್ತಿ ಚೊಕ್ಕಂಡಹಳ್ಳಿ, ಯಶವಂತಪುರ, ಕಡತೂರು, ಬರಗೂರು ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಬಹಳಷ್ಟು ರೈತರು ಹಲವು ಬಗೆ ಹೂವು ಬೆಳೆಯನ್ನು ಬೆಳೆಯುತ್ತಿದ್ದಾರೆ. ನಗರ ಪ್ರದೇಶದ ಮಂದಿ ಶುಭ ಕಾರ್ಯಕ್ರಮಗಳ ಸಂದರ್ಭದಲ್ಲಿ ಅಲಂಕಾರಗಳಿಗೆ ಬಳಸುವ ಹೂವುಗಳನ್ನು ಈ ತಾಲ್ಲೂಕಿನಲ್ಲಿ ಹೆಚ್ಚು ಬೆಳೆಯುತ್ತಿದ್ದಾರೆ ಎಂಬುದೇ ವಿಶೇಷ.

ಡಚ್ ರೋಸ್, (ಈ ಗುಲಾಬಿಯಲ್ಲಿ ಪರಿಮಳ ಕಡಿಮೆ. ಆದರೆ ಬೇಡಿಕೆ ಹೆಚ್ಚು) ಆಸ್ಟರ್, ಸೇವಂತಿಗೆ, ಸುಗಂಧ ರಾಜ, ಗ್ಲಾಡಿಯಸ್ ಹೂವುಗಳನ್ನು ಹೆಚ್ಚು ಬೆಳೆಯಲಾಗುತ್ತಿದೆ. ಅದರ ಜೊತೆಗೆ ಕನಕಾಂಬರ, ಮಲ್ಲಿಗೆ, ಚೆಂಡು ಮಲ್ಲಿಗೆ ಬೆಳೆಯುವ ರೈತರೂ ಇದ್ದಾರೆ. ಈ ಹೂವುಗಳಿಗೂ ಬೇಡಿಕೆ ಹೆಚ್ಚಿದೆ. ಎಲ್ಲಾ ಕಾರ್ಯಕ್ರಮಗಳಿಗೂ ಈ ಹೂವುಗಳನ್ನು ಬಳಸುವುದರಿಂದ ಬೇಡಿಕೆ ಸದಾ ಕಾಲ ಇರುವುದು ವಿಶೇಷ. ಬಟನ್ ರೋಸ್, ಡಚ್ ರೋಸ್, ಈ ತಾಲ್ಲೂಕಿನಲ್ಲಿ ಅತ್ಯಂತ ಹೆಚ್ಚು (642 ಹೆಕ್ಟೇರ್) ವ್ಯಾಪ್ತಿಯಲ್ಲಿ ಬೆಳೆಯಲಾಗುತ್ತಿದೆ. ಎರಡನೇ ಸ್ಥಾನದಲ್ಲಿ ಚೆಂಡು ಮಲ್ಲಿಗೆ ಇದೆ. 500 ಹೆಕ್ಟೇರ್ ಪ್ರದೇಶದಲ್ಲಿ ಈ ಹೂವನ್ನು ಬೆಳೆಯಲಾಗುತ್ತಿದೆ.

ಬೆಂಗಳೂರು ಮಾರುಕಟ್ಟೆ: ತಾಲ್ಲೂಕಿನ ಬಹಳಷ್ಟು ಹೂ ಬೆಳೆಗಾರರು ತಾವು ಬೆಳೆಯುವ ರೋಸ್ ಬೆಳೆಯನ್ನು ಬೆಂಗಳೂರಿಗೆ ಕೊಂಡೊಯ್ದು ಮಾರುತ್ತಾರೆ. ಕೆಲವೊಮ್ಮೆ ವ್ಯಾಪಾರಿಗಳೇ ತೋಟದ ಬಳಿ ಬಂದು ಹೂವನ್ನು ಖರೀದಿಸಿ ಸಾಗಿಸುತ್ತಾರೆ. ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗುತ್ತಿರುವ ಡಚ್ ರೋಸ್ ಹೂವನ್ನು ಕಟಾವು ಮಾಡಿದ ನಂತರ ಅದನ್ನು 20 ಹೂವಿನಂತೆ ಬೇರ್ಪಡಿಸಿ ಪೇಪರ್ ಪ್ಯಾಕ್‌ನಲ್ಲಿಟ್ಟು ಬೆಂಗಳೂರಿಗೆ ಸಾಗಿಸಲಾಗುತ್ತದೆ.

ಮೂರು ವರ್ಷದಿಂದ ಡಚ್ ರೋಸ್ ಬೆಳೆಯುತ್ತಿದ್ದೇವೆ. ಒಂದೂ ಕಾಲು ಎಕರೆ ಜಮೀನಿನಲ್ಲಿ ನೀರು, ಗೊಬ್ಬರ ಸೇರಿದಂತೆ ನಿರ್ವಹಣೆಗಾಗಿ ಪ್ರತಿ ತಿಂಗಳಿಗೆ ₹ 25ರಿಂದ ₹ 30 ಸಾವಿರ ಖರ್ಚು ಮಾಡಬೇಕು. 20 ಹೂವಿನ ಕಟ್ಟಿಗೆ ₹ 50ರಿಂದ ₹75 ಸಿಗುತ್ತಿದೆ. ಪ್ರತಿ ತಿಂಗಳು ಸುಮಾರು 4 ಸಾವಿರ ಕಟ್ಟುಗಳನ್ನು ಮಾರುತ್ತೇವೆ ಎನ್ನುತ್ತಾರೆ ಲಕ್ಕೂರಿನ ರೈತ ಚಂದ್ರಪ್ಪ.

ಮಳೆ ಸಮರ್ಪಕವಾಗಿ ಆಗುತ್ತಿಲ್ಲ. ಟೊಮೆಟೊ ಮತ್ತಿತರ ಬೆಳೆಗಳಿಗೆ ಬೆಲೆ ನಿಯಮಿತವಾಗಿ ಇರುವುದಿಲ್ಲ. ತರಕಾರಿ ಬೆಳೆಗಳನ್ನು ಬೆಳೆಯುವುದರಿಂದ ನೀರು ಹೆಚ್ಚು ಖರ್ಚಾಗುತ್ತದೆ. ಹೀಗಾಗಿಯೇ ನಮ್ಮ ಹಳ್ಳಿಯೊಂದರಲ್ಲೇ ಸುಮಾರು 100 ಎಕರೆಯಷ್ಟು ಪ್ರದೇಶದಲ್ಲಿ ರೈತರು ಡಚ್ ರೋಸ್ ಬೆಳೆಯುತ್ತಿದ್ದಾರೆ ಎಂದು ಯಶವಂತಪುರ ಗ್ರಾಮದ ರೈತ ಮುನಿರಾಜು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT