ಮುಳಬಾಗಿಲು: ತಾಲ್ಲೂಕಿನ ಮರವೇಮನೆ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ದ್ರೌಪತಮ್ಮ ಮತ್ತು ಧರ್ಮರಾಯ ಸ್ವಾಮಿಗಳ ಕರಗ ಮಹೋತ್ಸವ ಕಾರ್ಯಕ್ರಮ ಶುಕ್ರವಾರ ಅದ್ಧೂರಿಯಾಗಿ ನಡೆಯಿತು.
ಮೊದಲ ವರ್ಷದ ಕರಗ ಮಹೋತ್ಸವದ ಪ್ರಯುಕ್ತ ಮೂಲ ವಿಗ್ರಹಕ್ಕೆ ಹೂ, ವಿದ್ಯುತ್ ದೀಪ, ತುಳಸಿ ದಳಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಲೋಕ ಕಲ್ಯಾಣ ಮತ್ತು ಗ್ರಾಮದ ಸುಭಿಕ್ಷೆಗಾಗಿ ನಡೆಸಲಾಗುವ ಕರಗದ ಪ್ರಯುಕ್ತ ಅಭಿಷೇಕ, ಮಹಾ ಮಂಗಳಾರತಿ, ತೀರ್ಥ, ಪ್ರಸಾದ ವಿನಿಯೋಗ ನಡೆಯಿತು.
ಗ್ರಾಮ ದೇವತೆಗಳಾದ ರೇಣುಕಾ ಯೆಲ್ಲಮ್ಮ, ಗಂಗಮ್ಮ, ಶ್ರೀರಾಮ, ಯಲ್ಲಮ್ಮ ಮತ್ತು ಮುಷ್ಟೂರು ಗಂಗಮ್ಮ ದೇವಸ್ಥಾನಗಳನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಪ್ರಮುಖ ಬೀದಿಗಳನ್ನು ತಳಿರು ತೋರಣಗಳಿಂದ ಶೃಂಗಾರ ಮಾಡಲಾಗಿತ್ತು.
ಕರಗವನ್ನು ಹೊತ್ತ ಎಂ.ವಿ.ನಾಗರಾಜ್ ಗ್ರಾಮದ ಮುಖ್ಯ ರಸ್ತೆ ಹಾಗೂ ಮುಷ್ಟೂರು, ಎನ್.ಕೊತ್ತೂರು ಗ್ರಾಮಗಳ ಎಲ್ಲ ಮನೆಗಳ ಬಳಿ ನೃತ್ಯ ಮಾಡುವ ಮೂಲಕ ಕರಗದ ಮೆರವಣಿಗೆ ನಡೆಸಿದರು. ಕರಗ ಮನೆಗಳ ಬಳಿ ಬಂದ ತಕ್ಷಣ ಮಹಿಳೆಯರು ಹೂ, ಹಣ್ಣು ಕಾಯಿಗಳನ್ನು ಸಮರ್ಪಿಸಿ ಕರಗಕ್ಕೆ ಪೂಜೆ ಸಲ್ಲಿಸಿ ಹರಕೆ ತೀರಿಸಿಕೊಂಡರು.
ಪಲ್ಲಕ್ಕಿ ಮೆರವಣಿಗೆ ನಡೆಯಿತು. ರಸ ಸಂಜೆ ಕಾರ್ಯಕ್ರಮ ನಡೆಯಿತು. ನಂತರ ಶುಕ್ರವಾರ ಬೆಳಿಗ್ಗೆ ಅಗ್ನಿಕುಂಡ ಪ್ರವೇಶ, ವಸಂತೋತ್ಸವ ಮತ್ತು ಒಣಕೆ ಕಾರ್ಯಕ್ರಮಗಳು ನಡೆದವು.
ಮಹೋತ್ಸವಕ್ಕೆ ಬಂದಿದ್ದ ಭಕ್ತರಿಗೆ ದಾನಿಗಳು ಅನ್ನದಾನದ ಜತೆಗೆ ಮಜ್ಜಿಗೆ, ಪಾನಕ, ಕೋಸುಂಬರಿಗಳನ್ನು ವಿತರಿಸಿದರು.