ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ.ಡಿ ಬೆದರಿಕೆ; ಸರ್ಕಾರವೇ ಬದಲು!

ವೋಟಿಗೆ ಹಣ; ಪರ್ಸೆಂಟೇಜ್‌ನಲ್ಲಿ ವಸೂಲಿ–ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ
Last Updated 7 ಜುಲೈ 2022, 4:27 IST
ಅಕ್ಷರ ಗಾತ್ರ

ಕೋಲಾರ: ‘ಅಕ್ರಮ ಸಂಪಾದನೆ ಮೇಲೆ ಇ.ಡಿ ದಾಳಿ ನಡೆಸುವ ಬೆದರಿಕೆ ಹಾಕಿ ಒಂದು ಪಕ್ಷದ ಶಾಸಕರನ್ನು ಇನ್ನೊಂದು ಪಕ್ಷಕ್ಕೆ ಸೆಳೆದು, ಕಾನೂನುಬದ್ಧವಾಗಿ ರಚನೆಯಾಗಿರುವ ಚುನಾಯಿತ ಸರ್ಕಾರವನ್ನೇಬದಲಾಯಿಸುವಹೊಸ ವ್ಯವಸ್ಥೆ ದೇಶದಲ್ಲಿ ಬಂದಿದೆ’ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಸೇರಿ ಸ್ಥಾಪಿಸಿರುವ ‘ಸ್ವಾಭಿಮಾನಿ ಕೋಲಾರ ಆಂದೋಲನ’ಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

‘2019ರಲ್ಲಿ ಕರ್ನಾಟಕದಲ್ಲಿ, ಬಳಿಕ ಮಧ್ಯಪ್ರದೇಶದಲ್ಲಿ, ಈಗ ಮಹಾರಾಷ್ಟ್ರದಲ್ಲಿ ಸರ್ಕಾರ ಬದಲಾವಣೆ ಆಗಿದ್ದನ್ನು ನೋಡಿದ್ದೇವೆ’ ಎಂದರು.

‘ಈಗ ವ್ಯವಸ್ಥೆಯು ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕುವ ಹಂತಕ್ಕೂ ಬಂದು ನಿಂತಿದೆ. ಆದರೆ, ನ್ಯಾಯಮೂರ್ತಿಗಳು ಇದಕ್ಕೆ ಹೆದರಲ್ಲ’ ಎಂದು ತಿರುಗೇಟು ನೀಡಿದರು.

ಸರಕಾಗಿರುವ ಮತ: ‘ವೋಟುಗಳನ್ನು ಸರಕು ಮಾಡಿಕೊಂಡು ಮತದಾರರಿಗೆ ಣ ಹಂಚುತ್ತಿರುವ ರಾಜಕಾರಣಿಗಳು, ಗೆದ್ದ ಮೇಲೆ ಅಭಿವೃದ್ಧಿ ಕೆಲಸಗಳಲ್ಲಿ ಶೇ 10, ಶೇ 40 ಪರ್ಸೆಂಟೇಜ್‌ ರೂಪದಲ್ಲಿ ವಸೂಲಿ ಮಾಡುತ್ತಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಇದನ್ನು ಹೇಳಿದ್ದಾರೆ. ಭ್ರಷ್ಟರಹಿತವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೂ ಸಾಧ್ಯವಾಗುತ್ತಿಲ್ಲ’ ಎಂದು ನುಡಿದರು.

‘ಗ್ರಾಮ ಪಂಚಾಯಿತಿ ಸದಸ್ಯ ಚುನಾವಣೆ ಗೆಲ್ಲಲು ₹ 10 ಕೋಟಿವರೆಗೆ ಖರ್ಚು ಮಾಡುತ್ತಿದ್ದಾನೆ. ಕಾರ್ಪೊರೇಟರ್‌ ಆಗಲು ₹ 20 ಕೋಟಿ ಖರ್ಚು ಮಾಡುತ್ತಾರೆ. ಎಲ್ಲಾ ಹಂತಗಳಲ್ಲೂ ಎಲ್ಲಾ ರಾಜಕೀಯ ಪಕ್ಷಗಳು ಹಣ ಚೆಲ್ಲುತ್ತಿವೆ. ಕಾರು, ಮೊಬೈಲ್, ಧಾನ್ಯ, ತರಕಾರಿ, ಬಟ್ಟೆಗೆ ಹಣ ನೀಡಿ ಖರೀದಿಸಿದಂತೆ ಮತವನ್ನೂ ಖರೀದಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ರಿಯಲ್‌ ಎಸ್ಟೇಟ್‌ ಏಜೆಂಟ್‌ಗಳು, ಕೈಗಾರಿಕೋದ್ಯಮಿಗಳು ಚುನಾವಣೆಗೆ ನಿಂತು ಗೆಲ್ಲುತ್ತಿದ್ದಾರೆ. ಅವರಿಗೆ ಜನಸಾಮಾನ್ಯರ ಮೇಲೆ ಕಾಳಜಿ ಬರಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

‘ಸರ್ಕಾರ ಮಾಡಬೇಕಾದ ಕೆಲಸಗಳನ್ನು ಖಾಸಗಿಯವರಿಗೆ ವಹಿಸಲಾಗುತ್ತಿದೆ. ಹೀಗಾಗಿ, ಖಾಸಗಿ ಶಾಲೆ, ಖಾಸಗಿ ಆಸ್ಪತ್ರೆ ಹೆಚ್ಚುತ್ತಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ₹ 20 ಸಾವಿರ ಖರ್ಚಾದರೆ, ಅದೇ ಸಮಸ್ಯೆಗೆ ಖಾಸಗಿ ಆಸ್ಪತ್ರೆಯಲ್ಲಿ ₹ 5 ಲಕ್ಷ ವಸೂಲಿ ಮಾಡುತ್ತಾರೆ’ ಎಂದು ವ್ಯವಸ್ಥೆಯನ್ನು ಟೀಕಿಸಿದರು.

‘ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲದ ರೀತಿಯಲ್ಲಿ ಚುನಾವಣಾ ಆಯೋಗವು ಚುನಾವಣೆ ನಡೆಸಬೇಕು. ಅದು ಸಂಪೂರ್ಣವಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಭ್ರಷ್ಟಾಚಾರ ಎಸಗಿರುವುದು ಗೊತ್ತಾದರೆ ಚಾಲ್ತಿಯಲ್ಲಿರುವ ಕಾಯ್ದೆ ಬಳಸಿಕೊಂಡು ಜನಪ್ರತಿನಿಧಿಗಳನ್ನು ಅನರ್ಹಗೊಳಿಸಬೇಕು’ ಎಂದು ಆಗ್ರಹಿಸಿದರು.

‘ಚುನಾವಣೆಯಲ್ಲಿ ಹಣ ಹಂಚುವವರನ್ನು ಬಹಿಷ್ಕರಿಸಿ. ಊರಿನೊಳಗೆ ಬಿಟ್ಟುಕೊಳ್ಳಬೇಡಿ’ ಎಂದು ಕರೆ ನೀಡಿದರು.

‘ಸರ್ವಾಂಗೀಣ ಅಭಿವೃದ್ಧಿ ಎಂದರೆ ಎಲ್ಲಾ ಧರ್ಮೀಯರನ್ನು, ಎಲ್ಲಾ ಜಾತಿಯವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದು. ಜನರ ರಕ್ಷಣೆಗೆ ನಿಲ್ಲುವುದು ಜನಪ್ರತಿನಿಧಿಗಳು ಕರ್ತವ್ಯ’ ಎಂದು ಅವರು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT