ಪಟ್ನಾ: ಬೋಧ ಗಯಾದ ಮಹಾಬೋಧಿ ದೇಗುಲದಲ್ಲಿ 2013ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಇಂಡಿಯನ್ ಮುಜಾಹಿದೀನ್ (ಐಎಂ) ಉಗ್ರ ಸಂಘಟನೆಯ ಐವರು ತಪ್ಪಿತಸ್ಥರು ಎಂದು ಇಲ್ಲಿನ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ವಿಶೇಷ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.
ಶಿಕ್ಷೆಯ ಪ್ರಮಾಣವನ್ನು ಮೇ 31ರಂದು ಪ್ರಕಟಿಸುವುದಾಗಿ ಎನ್ಐಎ ವಿಶೇಷ ನ್ಯಾಯಾಧೀಶ ಮನೋಜ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆ, ಕಾನೂನುಬಾಹಿರ ಚಟುವಟಿಕೆ (ನಿಯಂತ್ರಣ) ಕಾಯ್ದೆ ಹಾಗೂ ಸ್ಫೋಟಕ ಕಾಯ್ದೆ ಅಡಿಯಲ್ಲಿ ಇಮ್ತಿಯಾಜ್ ಅನ್ಸಾರಿ, ಹೈದರ್ ಅಲಿ, ಮುಜಿಬ್ ಉಲ್ಲಾ, ಒಮೈರ್ ಸಿದ್ದಿಕಿ, ಅಜರುದ್ದೀನ್ ಖುರೇಷಿ ತಪ್ಪಿಸ್ಥರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಆರನೇ ಆರೋಪಿ ತೌಫೀಕ್ ಅಹ್ಮದ್ ಸ್ಫೋಟ ನಡೆಸಿದ ವೇಳೆ 18ಕ್ಕಿಂತ ಕಡಿಮೆ ವಯೋಮಾನದವನಾಗಿದ್ದ.
ಆತನೂ ತಪ್ಪಿತಸ್ಥ ಎಂದು ಕಳೆದ ವರ್ಷ ತೀರ್ಪು ನೀಡಿದ್ದ ಬಾಲಾಪರಾಧ ನ್ಯಾಯಾಲಯ, ಆತನನ್ನು ಮೂರು ವರ್ಷ ರಿಮ್ಯಾಂಡ್ ಹೋಂಗೆ ಕಳುಹಿಸಿದೆ.
ಮಹಾಬೋಧಿ ದೇಗುಲದಲ್ಲಿ ನಡೆದ ಸ್ಫೋಟದಲ್ಲಿ ಬಿಕ್ಕುಗಳು ಸೇರಿದಂತೆ ಹಲವರು ಗಾಯಗೊಂಡಿದ್ದರು.
ಆರೂ ಅಪರಾಧಿಗಳು ನಿಷೇಧಿತ ಸಿಮಿ ಸಂಘಟನೆ ಜತೆ ಸಹ ಸಂಪರ್ಕ ಹೊಂದಿದ್ದಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರು 2013ರ ಅಕ್ಟೋಬರ್ನಲ್ಲಿ ಪಟ್ನಾದ ಗಾಂಧಿ ಮೈದಾನದಲ್ಲಿ ಚುನಾವಣಾ ರ್ಯಾಲಿ ನಡೆಸುತ್ತಿದ್ದ ವೇಳೆ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದಲ್ಲಿಯೂ ಇವರು ವಿಚಾರಣೆ ಎದುರಿಸುತ್ತಿದ್ದಾರೆ.
**
ಆರೋಪಪಟ್ಟಿ
ನವದೆಹಲಿ: ಲಷ್ಕರ್–ಎ–ತಯ್ಯಿಬಾ ಉಗ್ರಗಾಮಿ ಸಂಘಟನೆಯ ಕಾರ್ಯಕರ್ತರು ಎಂದು ಶಂಕಿಸಲಾದ ಹತ್ತು ಮಂದಿಯ ವಿರುದ್ಧ ಎನ್ಐಎ, ದೆಹಲಿಯ ನ್ಯಾಯಾಲಯವೊಂದರಲ್ಲಿ ಆರೋಪಪಟ್ಟಿ ದಾಖಲಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.