ಕೋಲಾರ: ‘ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಜಿಲ್ಲೆಯ ಎಲ್ಲಾ 156 ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿರುವುದರಿಂದ ಜಿಲ್ಲೆಯ ಗ್ರಾಮೀಣ ಪ್ರದೇಶವನ್ನು ತ್ಯಾಜ್ಯ ಮುಕ್ತ ಎಂದು ಘೋಷಿಸಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು.
ಇಲ್ಲಿ ಭಾನುವಾರ ಜಿ.ಪಂ ಸಭಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಮಾತನಾಡಿ, ‘ಸಂಜೀವಿನಿ ಯೋಜನೆಯಡಿ ರಚನೆಯಾಗಿರುವ 25 ಗ್ರಾ.ಪಂ ಮಟ್ಟದ ಒಕ್ಕೂಟಗಳೊಂದಿಗೆ ಕಸ ಸಂಗ್ರಹಣೆ ಮತ್ತು ವಿಲೇವಾರಿ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.
‘ಒಕ್ಕೂಟಗಳ ಸದಸ್ಯರು ತರಬೇತಿ ಪಡೆದು ಕಸ ಸಂಗ್ರಹಣೆ ಮತ್ತು ವಿಲೇವಾರಿ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಕಸದ ಸಮಸ್ಯೆಗೆ ಮುಕ್ತಿ ದೊರೆತಿದೆ. ಜನರು ರಸ್ತೆ ಬದಿಯಲ್ಲಿ ಅಥವಾ ಖಾಲಿ ನಿವೇಶನಗಳಲ್ಲಿ ಕಸ ಎಸೆಯಬಾರದು. ಬದಲಿಗೆ ಸಮರ್ಪಕವಾಗಿ ವಿಲೇವಾರಿ ಮಾಡಬೇಕು’ ಎಂದು ಸಲಹೆ ನೀಡಿದರು.
‘ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಗ್ರಾಮೀಣ ಮಹಿಳೆಯರ ಆತ್ಮನಿರ್ಭರ್ ಯೋಜನೆಯಡಿ ದೇಶದಲ್ಲಿ 75 ಸ್ಫೂರ್ತಿದಾಯಕ ಯೋಶೋಗಾಥೆಗಳನ್ನು ಬಿಡುಗಡೆ ಮಾಡಿದೆ. ಈ ಪೈಕಿ ಜಿಲ್ಲೆಯ ಮಾಲೂರು ತಾಲ್ಲೂಕಿನ ಜೋಡಿಪುರ ಗ್ರಾಮದ ಮಹಾಲಕ್ಷ್ಮೀ ಸ್ವ-ಸಹಾಯ ಸಂಘದವರು ತಯಾರಿಸಿರುವ ಸಿರಿ ಧಾನ್ಯಗಳ ಆರೋಗ್ಯ ಪೇಯ ಕುರಿತ ಸ್ಫೂರ್ತಿದಾಯಕ ಯೋಶೋಗಾಥೆ ಸೇರಿದೆ’ ಎಂದು ವಿವರಿಸಿದರು.
ಮಹಿಳಾಸ್ನೇಹಿ ಗ್ರಾ.ಪಂ ಅಭಿಯಾನದ ಭಾಗವಾಗಿ ಜಿ.ಪಂ ಕಚೇರಿಯಲ್ಲಿ ನಿರ್ಮಿಸಿರುವ ಶಿಶು ಪಾಲನಾ ಕೇಂದ್ರ ಮತ್ತು ಮಹಿಳೆಯರ ವಿಶ್ರಾಂತಿ ಕೇಂದ್ರವನ್ನು ಸೇವೆಗೆ ಮುಕ್ತಗೊಳಿಸಲಾಯಿತು. ಜಿ.ಪಂ ಉಪ ಕಾರ್ಯದರ್ಶಿ ಸಂಜೀವಪ್ಪ ಹಾಗೂ ಸಿಬ್ಬಂದಿ ಹಾಜರಿದ್ದರು.