ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಗ್ರಸ್ಥವಾದ ಪಶು ಇಲಾಖೆ: ಚಿಕಿತ್ಸೆಗೆ ಅಲೆದಾಟ

ಪಶುಪಾಲನಾ ಇಲಾಖೆಯಲ್ಲಿ ಅರ್ಧದಷ್ಟು ಹುದ್ದೆ ಖಾಲಿ: ನೇಮಕಾತಿಗೆ ಸರ್ಕಾರದ ಮೀನಮೇಷ
Last Updated 17 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಕೋಲಾರ: ಹೈನುಗಾರಿಕೆಯೇ ಜೀವಾಳವಾಗಿರುವ ಜಿಲ್ಲೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯು ಸಿಬ್ಬಂದಿ ಕೊರತೆಯಿಂದ ರೋಗಗ್ರಸ್ಥವಾಗಿದೆ. ಜಿಲ್ಲೆಯ ಬಹುಪಾಲು ಪಶು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಇಲ್ಲದೆ ರೈತರು ಬವಣೆ ಪಡುವಂತಾಗಿದೆ.

ಜಿಲ್ಲೆಯಲ್ಲಿ ಸತತ ಬರಗಾಲ ಇರುವುದರಿಂದ ಕೃಷಿ ನಿರ್ವಹಣೆಯು ರೈತರಿಗೆ ಕಷ್ಟವಾಗಿದೆ. ಹೀಗಾಗಿ ಬಹುಪಾಲು ರೈತರು ಹೈನುಗಾರಿಕೆಯತ್ತ ಮುಖ ಮಾಡಿದ್ದಾರೆ. ಹಾಲು ಸಂಗ್ರಹಣೆಯಲ್ಲಿ ಜಿಲ್ಲೆಯ ಹಾಲು ಒಕ್ಕೂಟವು (ಕೋಚಿಮುಲ್‌) ರಾಜ್ಯದಲ್ಲೇ 2ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ದಿನಕ್ಕೆ ಸುಮಾರು 6 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ.

ಜಿಲ್ಲೆಯಲ್ಲಿ ಸುಮಾರು 8.47 ಲಕ್ಷ ಜಾನುವಾರುಗಳಿದ್ದು, ರೈತ ಕುಟುಂಬಗಳಿಗೆ ಹೈನುಗಾರಿಕೆಯೇ ಪ್ರಮುಖ ಆದಾಯ ಮೂಲವಾಗಿದೆ. ಆದರೆ, ಹೈನುಗಾರಿಕೆಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕಾದ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯು ಸಿಬ್ಬಂದಿ ಕೊರತೆಯಿಂದ ನರಳುತಿದೆ.

ಜಿಲ್ಲೆಯಲ್ಲಿ ಸದ್ಯ 26 ಪಶು ಆಸ್ಪತ್ರೆ, 59 ಪಶು ಚಿಕಿತ್ಸಾಲಯ, 22 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಹಾಗೂ 5 ಸಂಚಾರ ಪಶು ಚಿಕಿತ್ಸಾಲಯ, ಜಿಲ್ಲಾ ಕೇಂದ್ರದಲ್ಲಿ 1 ಪಾಲಿ ಕ್ಲಿನಿಕ್‌ ಇವೆ. ಜಿಲ್ಲೆಯ ಪಶು ಆಸ್ಪತ್ರೆಗಳಿಗೆ ಮಂಜೂರಾಗಿರುವ 490 ಹುದ್ದೆಗಳ ಪೈಕಿ ಸುಮಾರು ಅರ್ಧದಷ್ಟು ಹುದ್ದೆಗಳು ಹಲವು ವರ್ಷಗಳಿಂದ ಖಾಲಿಯಿದ್ದು, ಹುದ್ದೆ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿಲ್ಲ. ಹೀಗಾಗಿ ಹಾಲಿ ಸಿಬ್ಬಂದಿ ಮೇಲೆ ಕಾರ್ಯ ಒತ್ತಡ ಹೆಚ್ಚಿದೆ.

ಖಾಲಿ ಹುದ್ದೆ: ಇಲಾಖೆಯಲ್ಲಿ ಮುಖ್ಯವಾಗಿ ಉಪ ನಿರ್ದೇಶಕರ ಹುದ್ದೆಯೇ ಖಾಲಿಯಿದೆ. ಉಪ ನಿರ್ದೇಶಕರಾಗಿದ್ದ ಡಾ.ಮಧುಸೂದನರೆಡ್ಡಿ ಅವರು ಸೆಪ್ಟೆಂಬರ್‌ ಅಂತ್ಯದಲ್ಲಿ ನಿವೃತ್ತರಾಗಿದ್ದು, ಮಾಲೂರು ತಾಲ್ಲೂಕಿನ ಸಹಾಯಕ ನಿರ್ದೇಶಕ ಎನ್‌.ಜಗದೀಶ್‌ಕುಮಾರ್‌ ಅವರನ್ನು ಪ್ರಭಾರ ಉಪ ನಿರ್ದೇಶಕರಾಗಿ ನಿಯೋಜಿಸಲಾಗಿದೆ.

1 ಸಹಾಯಕ ನಿರ್ದೇಶಕರು, 9 ಪಶು ವೈದ್ಯಾಧಿಕಾರಿಗಳು, 5 ಜಾನುವಾರು ಅಭಿವೃದ್ಧಿ ಅಧಿಕಾರಿ, 13 ಜಾನುವಾರು ಅಧಿಕಾರಿಗಳು, 19 ಹಿರಿಯ ಪಶುವೈದ್ಯ ಪರೀಕ್ಷಕರು, 22 ಪಶುವೈದ್ಯ ಪರೀಕ್ಷಕರು, 35 ಪಶು ವೈದ್ಯಕೀಯ ಸಹಾಯಕರ ಹುದ್ದೆಗಳು ಖಾಲಿಯಿವೆ.

ಮತ್ತೊಂದೆಡೆ ಕ್ಷ–ಕಿರಣ ತಂತ್ರಜ್ಞ 1, ವಾಹನ ಚಾಲಕರು 4, ಸಹಾಯಕ ಆಡಳಿತಾಧಿಕಾರಿ 1, ಸೂಪರಿಂಟೆಂಡೆಂಟ್‌ 1, ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರು 4, ಬೆರಳಚ್ಚುಗಾರರು 2 ಹಾಗೂ ಡಿ ದರ್ಜೆ ನೌಕರರ 126 ಹುದ್ದೆಗಳು ಭರ್ತಿಯಾಗಿಲ್ಲ. ಸಿಬ್ಬಂದಿ ಸಮಸ್ಯೆಯು ಇಲಾಖೆಯ ದೈನಂದಿನ ಕಾರ್ಯ ಚಟುವಟಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ಹೆಚ್ಚುವರಿ ಕೆಲಸ: ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಹಾಲಿ ಸಿಬ್ಬಂದಿಯೇ ಮೂರ್ನಾಲ್ಕು ಆಸ್ಪತ್ರೆಗಳಲ್ಲಿ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಕ್ಕಪಕ್ಕದ ಗ್ರಾಮಗಳ ಪಶು ಆಸ್ಪತ್ರೆಗಳಿಗೆ ಪಶು ವೈದ್ಯಾಧಿಕಾರಿಗಳನ್ನು ನಿಯೋಜನೆ ಮೇಲೆ ಕಳುಹಿಸಿ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ. ಮತ್ತೆ ಕೆಲ ಗ್ರಾಮಗಳ ಪಶು ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿಗಳು ಇಲ್ಲದ ಕಾರಣ ಸ್ಥಳೀಯ ರೈತರು ತಮ್ಮ ಕೃಷಿ ಕೆಲಸ ಬಿಟ್ಟು ದೂರದ ಪಶು ಆಸ್ಪತ್ರೆಗಳಿಗೆ ತೆರಳಿ ಜಾನುವಾರುಗಳ ತಪಾಸಣೆ ಮಾಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

‘ಹಿರಿಯ ಅಧಿಕಾರಿಗಳು ಪಶು ವೈದ್ಯಾಧಿಕಾರಿ ಹುದ್ದೆ ಖಾಲಿಯಿರುವ ಆಸ್ಪತ್ರೆಯಲ್ಲೂ ಹೆಚ್ಚುವರಿಯಾಗಿ ಕೆಲಸ ಮಾಡುವಂತೆ ಆದೇಶಿಸುತ್ತಾರೆ. ವಾರದಲ್ಲಿ ತಲಾ 3 ದಿನ ಒಂದೊಂದು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಇದರಿಂದ ದೈಹಿಕವಾಗಿ ತುಂಬಾ ಶ್ರಮವಾಗುತ್ತಿದೆ. ಹಿರಿಯ ಅಧಿಕಾರಿಗಳ ಆದೇಶ ಪಾಲಿಸಲೇಬೇಕಾದ ಅನಿವಾರ್ಯತೆಯಿಂದ ಮಾನಸಿಕವಾಗಿ ಸಾಕಷ್ಟು ಕುಗ್ಗಿದ್ದೇವೆ’ ಎಂದು ಹಲವು ಪಶು ವೈದ್ಯಾಧಿಕಾರಿಗಳು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

ಲಸಿಕೆ ಅಭಿಯಾನ: ಜಿಲ್ಲೆಯಲ್ಲಿ ಈಗಾಗಲೇ 16ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕೆ ಅಭಿಯಾನ ಆರಂಭವಾಗಿದ್ದು, ಕಾಲುಗಳಲ್ಲಿ ಗೊರಸಲು ಹೊಂದಿರುವ ದನ, ಎಮ್ಮೆ, ಹಂದಿ, ಕುರಿ ಹಾಗೂ ಮೇಕೆಗಳಿಗೆ ನ.4ರೊಳಗೆ ಲಸಿಕೆ ಹಾಕಬೇಕಿದೆ. ಲಸಿಕೆ ಹಾಕುವ ಜವಾಬ್ದಾರಿಯೂ ಇಲಾಖೆಯ ಹೆಗಲೇರಿದ್ದು, ಅಭಿಯಾನಕ್ಕೆ ಸಿಬ್ಬಂದಿ ಕೊರತೆಯ ಬಿಸಿ ತಟ್ಟಿದೆ.

*
ಖಾಲಿ ಹುದ್ದೆ ಭರ್ತಿ ಮಾಡುವಂತೆ ಇಲಾಖೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಸಿಬ್ಬಂದಿ ಕೊರತೆಯಿರುವ ಆಸ್ಪತ್ರೆಗಳಲ್ಲಿ ಹಾಲಿ ಸಿಬ್ಬಂದಿಯೇ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸಿ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ.
–ಎನ್‌.ಜಗದೀಶ್‌ಕುಮಾರ್‌, ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಪ್ರಭಾರ ಉಪ ನಿರ್ದೇಶಕ

*
ಜಿಲ್ಲೆಯ ಬಹುಪಾಲು ಪಶು ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ. ರೈತರು ರಾಸುಗಳಿಗೆ ಚಿಕಿತ್ಸೆ ಕೊಡಿಸಲು ದೈನಂದಿನ ಕೃಷಿ ಕೆಲಸ ಬಿಟ್ಟು ನಾಲ್ಕೈದು ಕಿ.ಮೀ ದೂರದ ಪಶು ಆಸ್ಪತ್ರೆಗಳಿಗೆ ನಡೆದು ಹೋಗುವ ಪರಿಸ್ಥಿತಿಯಿದೆ.
–ಕೆ.ನಾರಾಯಣಗೌಡ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಉಪಾಧ್ಯಕ್ಷ

**

ತಾಲ್ಲೂಕು ಜಾನುವಾರು ಸಂಖ್ಯೆ ಕುಕ್ಕುಟ ಸಂಖ್ಯೆ
ಕೋಲಾರ 1,69,954 13,16,857
ಶ್ರೀನಿವಾಸಪುರ 1,88,933 5,99,050
ಮುಳಬಾಗಿಲು 1,94,523 10,37,023
ಬಂಗಾರಪೇಟೆ 1,94.110 8,98,493
ಮಾಲೂರು 99,464 4,24,106

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT