ಕೋಲಾರ: ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮಾತ್ರ ರಾಜ್ಯದಲ್ಲಿ ಉತ್ತಮ ಹಾಗೂ ಭ್ರಷ್ಟಾಚಾರರಹಿತ ಆಡಳಿತ ನೀಡಲು ಸಾಧ್ಯ’ ಎಂದು ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.
ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಪ್ರಾಮಾಣಿಕ ಮತ್ತು ಜನಪರ ಶಾಸಕರನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿ ಆತಿಥ್ಯ ನೀಡುತ್ತಿದ್ದರು. ಅಲ್ಲದೇ, ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ಕೇಳಿದಷ್ಟು ಅನುದಾನ ಕೊಡುತ್ತಿದ್ದರು’ ಎಂದು ಬಣ್ಣಿಸಿದರು.
‘ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಒಂದೇ ಒಂದು ಸರ್ಕಾರಿ ಚೆಕ್ ಬೌನ್ಸ್ ಆಗಿಲ್ಲ. ಇದು ಅವರ ಸಮರ್ಥ ಆಡಳಿತಕ್ಕೆ ಕೈಗನ್ನಡಿ. ಕುಮಾರಸ್ವಾಮಿ ಅವರಿಗೆ ಉತ್ತಮ ಆಡಳಿತ ನಡೆಸುವ ಸಾಮರ್ಥ್ಯವಿದೆ. ಆದರೆ. ಕೆಲವರು ಅದಕ್ಕೆ ಅವಕಾಶ ಕೊಡುತ್ತಿಲ್ಲ. ನಾವೆಲ್ಲಾ ಸಿದ್ದರಾಮಯ್ಯರ ಶಿಷ್ಯರು. ಅವರು ಮತ್ತೆ ಮುಖ್ಯಮಂತ್ರಿಯಾದರೆ ರಾಜ್ಯಕ್ಕೆ ಒಳ್ಳೆಯದು’ ಎಂದರು.