ಕೋಲಾರ: ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಯಲುವಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿನ ಮಲದ ಗುಂಡಿಯನ್ನು ಭಾನುವಾರ ಮಾಧ್ಯಮದವರಿಗೆ ಖುದ್ದಾಗಿ ವಿದ್ಯಾರ್ಥಿಗಳೇ ತೋರಿಸಿದರು.
ಪ್ರಾಂಶುಪಾಲರು ಹಾಗೂ ಶಿಕ್ಷಕರ ಸಮ್ಮುಖದಲ್ಲಿ ಐದಾರು ಮಕ್ಕಳನ್ನು ಈ ಗುಂಡಿಯೊಳಗೆ ಇಳಿಸಿ ಸ್ವಚ್ಛಗೊಳಿಸಲಾಗಿತ್ತು.
‘ಸಹ ಶಿಕ್ಷಕರೊಬ್ಬರು ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿದ್ದಾರೆ. ಅದನ್ನು ತಡೆಯಲು ನಾನು ಹೋಗಿದ್ದೆ. ಮಲದ ಗುಂಡಿ ಬಳಿ ನಾನಿರುವ ಫೋಟೊವನ್ನು ಶಿಕ್ಷಕರೊಬ್ಬರು ಹಿಂಬದಿಯಿಂದ ತೆಗೆದಿದ್ದಾರೆ. ಈಗ ನನ್ನನ್ನೇ ಅಮಾನತು ಮಾಡಿದ್ದಾರೆ’ ಎಂದು ವಸತಿ ನಿಲಯದ ಪ್ರಾಂಶಪಾಲರಾದ ಭಾರತಮ್ಮ ತಿಳಿಸಿದರು.
ಕೋಲಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಸುನಿಲ್ ಎಸ್. ಹೊಸಮನಿ, ವಸತಿ ಶಾಲೆಗೆ ಭೇಟಿ ನೀಡಿದರು.
ಮಕ್ಕಳೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿ ಅಡುಗೆ ಕೋಣೆ, ಮಕ್ಕಳ ವಾಸ್ತವ್ಯ ಕೊಠಡಿ ಸೇರಿದಂತೆ ವಿವಿಧೆಡೆ ಪರಿಶೀಲಿಸಿದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಆರ್.ಶ್ರೀನಿವಾಸ್, ದಲಿತ ಮುಖಂಡರು, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು, ಹೋರಾಟಗಾರರು ವಸತಿ ನಿಲಯಕ್ಕೆ ಭೇಟಿ ನೀಡಿ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.