ಚಿಂತಾಮಣಿ: ಮುರುಗಮಲ್ಲ ಗ್ರಾಮದ ಅಮ್ಮಾಜಾನ್, ಬಾವಾಜಾನ್ ದರ್ಗಾದ ಉರುಸ್ ಅನ್ನು ಸರಳವಾಗಿ ಆಚರಿಸುವಂತೆ ಜಿಲ್ಲಾ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಮನವಿ ಮಾಡಿದ್ದಾರೆ.
ಮುರುಗಮಲ್ಲಾಗೆ ಭೇಟಿ ನೀಡಿ ದರ್ಗಾ ಹಾಗೂ ಸುತ್ತಮುತ್ತಲ ಪ್ರದೇಶಗಳನ್ನು ಅವರು ಪರಿಶೀಲನೆ ನಡೆಸಿದರು. ದರ್ಗಾದ ಆಡಳಿತ ಮಂಡಳಿ ಹಾಗೂ ಸಾರ್ವಜನಿಕ ಮುಖಂಡರೊಂದಿಗೆ ಮಾತುಕತೆ ನಡೆಸಿದರು.
ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದ ಉರುಸ್ ಈ ಬಾರಿ ಕೋವಿಡ್–19 ಕಾರಣಕ್ಕಾಗಿ ಅತ್ಯಂತ ಸರಳವಾಗಿ ನಡೆಯುತ್ತಿದೆ. ಇದೇ 30 ಮತ್ತು 31 ರಂದು ಎರಡು ದಿನ ಉರುಸ್ ಭಕ್ತಿ, ಭಾವಗಳಿಂದ ನಡೆಯಲಿದೆ.
ಉರುಸ್ಗೆ ರಾಜ್ಯ ಮತ್ತು ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದರು. ಇಲ್ಲಿಯ ಗಂಧೋತ್ಸವ ಮೆರವಣಿಗೆ, ಕವ್ವಾಲಿ ಕಾರ್ಯಕ್ರಮ ಜನಮನ್ನಣೆ ಗಳಿಸಿತ್ತು. ಎರಡು ದಿನ ಹಗಲು ರಾತ್ರಿ ಭಕ್ತರು ಸಂಭ್ರಮಿಸುತ್ತಿದ್ದರು.
ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷ ಅದ್ದೂರಿ ಆಚರಣೆಗೆ ಕಡಿವಾಣ ಹಾಕಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಸರಳವಾಗಿ, ಸಂಕೇತಿಕವಾಗಿ ಮಾತ್ರ ಆಚರಣೆ ಮಾಡಬೇಕು ಎಂದುಜಿಲ್ಲಾ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಸೂಚಿಸಿದರು.
ರಾತ್ರಿ 7 ಗಂಟೆ ಒಳಗಾಗಿ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ಮುಗಿಸಬೇಕು. ರಾತ್ರಿ ವೇಳೆಯಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಗಂಧೋತ್ಸವದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಹಾಗೂ ಷರತ್ತು ಪಾಲಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತದೆ. ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಸರ್ಕಲ್ ಇನ್ ಸ್ಪೆಕ್ಟರ್ ಶ್ರೀನಿವಾಸಪ್ಪ, ಕೆಂಚಾರ್ಲಹಳ್ಳಿ ಠಾಣೆಯ ಸಬ್ ಇನ್ ಸ್ಪೆಕ್ಟರ್ ರಂಜನ್ ಕುಮಾರ್, ಜಿಲ್ಲಾ ವಕ್ಫ್ ಅಧಿಕಾರಿ ನವೀದ್ ಪಾಷಾ, ಹಾಜಿ ಅನ್ಸರ್ ಖಾನ್, ತಯ್ಯೂಬ್ ನವಾಜ್ ಇದ್ದರು.