ಕೆಜಿಎಫ್: ಯುವಜನತೆ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಸಾಕಷ್ಟು ನಿರ್ದಶನಗಳಿವೆ. ಸಾಧಿಸುವ ಛಲ ಹೊಂದಿ, ಗುರಿಯನ್ನು ತಲುಪಿದರೆ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ನ್ಯಾಯಾಧೀಶ ದಯಾನಂದ ವಿ. ಹಿರೇಮಠ ಹೇಳಿದರು.
ರಾಬರ್ಟಸನ್ಪೇಟೆಯ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ಕಾನೂನು ಸೇವಾ ಸಮಿತಿಯಿಂದ ಮಂಗಳವಾರ ನಡೆದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಮಾತನಾಡಿದರು.
ಜೀವನದಲ್ಲಿ ಸಾಧಿಸುವ ಗುರಿ ಇಟ್ಟುಕೊಳ್ಳಬೇಕು. ಅದನ್ನು ಸಾಧಿಸುವ ಮಾರ್ಗ ಹುಡುಕಿಕೊಂಡು ಹೋದರೆ ಅಭಿವೃದ್ಧಿ ಹೊಂದಬಹುದು. ಒಬ್ಬ ಅಭಿವೃದ್ಧಿ ಹೊಂದಿದರೆ ಆತನ ಕುಟುಂಬ, ಸಮಾಜ, ನಂತರ ದೇಶ ಆಬಿವೃದ್ಧಿ ಹೊಂದುತ್ತದೆ ಎಂದರು.
ಸ್ವಾಮಿ ವಿವೇಕಾನಂದರು ಎಂದಿಗೂ ತಾನು, ತನ್ನ ಕುಟುಂಬ, ನನ್ನ ನೆರೆಹೊರೆಯವರು ಎಂಬ ಬಗ್ಗೆ ಚಿಂತೆ ಮಾಡಲಿಲ್ಲ. ಅವರು ಭಾರತದ ದೇಶದ ಬಗ್ಗೆ ಚಿಂತೆ ಮಾಡಿದರು. ಯುವಶಕ್ತಿಯನ್ನು ಬಡಿದೆಬ್ಬಿಸುವ ಕಾರ್ಯ ಮಾಡಿದರು. ಆದ್ದರಿಂದಲೇ ಅವರ ಹೆಸರು ಇನ್ನೂ ಶಾಶ್ವತವಾಗಿ ಉಳಿದಿದೆ ಎಂದು ಹೇಳಿದರು.
ನ್ಯಾಯಾಧೀಶೆ ಎಂ.ಡಿ. ರೂಪಾ, ವಕೀಲರ ಸಂಘದ ಅಧ್ಯಕ್ಷ ಕೆ.ಸಿ. ನಾಗರಾಜ್, ಪ್ರಾಂಶುಪಾಲೆ ಡಾ.ರೇಖಾ ಸೇಥಿ ಹಾಜರಿದ್ದರು.