ಕೋಲಾರ: ರಾಜ್ಯ ಯುವಜನ ಆಯೋಗ ರಚನೆ ಮಾಡುವಂತೆ ಒತ್ತಾಯಿಸಿ ಸಂವಾದ ಯುವ ಸಂಪನ್ಮೂಲ ಕೇಂದ್ರ ಹಾಗೂ ಯುವ ಮುನ್ನಡೆ ತಂಡದಿಂದ ನಗರದಲ್ಲಿ ಶನಿವಾರ ಮಾನವ ಸರಪಳಿ ನಿರ್ಮಿಸಿದರು.
ಸಂವಾದ ಯುವ ಸಂಪನ್ಮೂಲ ಕೇಂದ್ರದ ಸಿದ್ದಯ್ಯ ಬಿ.ಶಶಿರಾಜ್ ಮಾತನಾಡಿ, ‘ಸವಾಲುಗಳು ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಯುವಜನ ಆಯೋಗ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.
‘ಯುವಜನರಿಗೆ ಶಿಕ್ಷಣದ ಹಕ್ಕು, ವೃತ್ತಿ ಮಾರ್ಗದರ್ಶನ ಮತ್ತು ಆಪ್ತ ಸಮಾಲೋಚನೆಯ ಹಕ್ಕು, ಉದ್ಯೋಗದ ಹಕ್ಕು, ಆರೋಗ್ಯದ ಹಕ್ಕು, ಅನನ್ಯತೆಯ ಹಕ್ಕು, ಘನತೆ ಮತ್ತು ಶೋಷಣೆ ರಹಿತ ಜೀವನ ನಡೆಸುವ ಹಕ್ಕು, ಆಯ್ಕೆಯ ಹಕ್ಕು ಮತ್ತು ಸಾಂಸ್ಕøತಿಕ ಹಕ್ಕುಗಳಿವೆ ಆದರೆ ಈ ಹಕ್ಕುಗಳ ಬಗ್ಗೆ ಅರಿಯುವ ಮತ್ತು ಹಕ್ಕುಗಳನ್ನು ಸಕಾರಗೊಳಿಸುವ ವ್ಯವಸ್ಥೆಗಳಾಗಬೇಕು’ ಎಂದು ಆಗ್ರಹಿಸಿದರು.
‘ಯುವಜನ ಸಬಲೀಕರಣ ಮತ್ತು ಯುವಜನ ಹಕ್ಕುಗಳ ಸಂರಕ್ಷಣೆಯ ಉದ್ದೇಶವುಳ್ಳ ಆಯೋಗವು ಯುವಜನರ ಪರ ಅಧ್ಯಯನ, ತನಿಖೆ, ಸಾರ್ವಜನಿಕ ಅರಿವು ಮತ್ತು ಸರಕಾರಕ್ಕೆ ಶಿಪಾರಸ್ಸುಗಳನ್ನು ಮಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬಹುದು ಇದರ ಕುರಿತು ಸರಕಾರ ವಿಶೇಷ ಗಮನ ಹರಿಸಬೇಕು’ ಎಂದರು.