ಬಂಗಾರಪೇಟೆ: ಪುರಸಭೆ ಸದಸ್ಯರೊಬ್ಬರ ಕುಮ್ಮಕ್ಕಿನಿಂದ ಪುರಸಭೆ ಅಧಿಕಾರಿಗಳು ಹೋಟೆಲ್ ರವಿ ಅವರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ವೇದ ಧರ್ಮ ಪರಿಪಾಲನಾ ಮಂಡಳಿ(ಬ್ರಾಹ್ಮಣ ಸಂಘ) ಸದಸ್ಯರು ಗುರುವಾರ ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರು.
ಪುರಸಭೆ ಆರೋಗ್ಯ ನಿರೀಕ್ಷಕ ಗೋವಿಂದರಾಜು ಹಾಗೂ ಮತ್ತೊಬ್ಬ ಆರೋಗ್ಯ ನಿರೀಕ್ಷಕ ಗೋವಿಂದರಾಜು ಅವರು ಹೋಟೆಲ್ ಒಳಗೆ ಅಕ್ರಮ ಪ್ರವೇಶ ಮಾಡಿ, ಪುರುಷ ಸಿಬ್ಬಂದಿಯನ್ನು ಬಲವಂತವಾಗಿ ಹೊರಹಾಕಿದ್ದಾರೆ ಎಂದು ದೂರಿದರು.
ಅಲ್ಲದೆ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ಹೋಟೆಲ್ ಒಳಗೆ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗಿದ್ದಾರೆ. ಹೋಟೆಲ್ ಮುಖ್ಯ ದ್ವಾರದ ಬಾಗಿಲು ಮುಚ್ಚಿದ್ದನ್ನು ಪ್ರಶ್ನಿಸಿದ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಪುರಸಭೆ ಸದಸ್ಯ ಅರುಣಾಚಲಂ ಮಣಿ ಹೇಳಿದ್ದಾರೆ. ಅದಕ್ಕೆ ಬೀಗ ಹಾಕುತ್ತಿದ್ದೇವೆ ಎಂದು ಹೇಳಿ ಹೋಗಿದ್ದಾರೆ ಎಂದು ಆರೋಪಿಸಿದರು.
ಸದರಿ ಘಟನೆ ಬಗ್ಗೆ ನ್ಯಾಯ ಕೇಳಲು ಹೋಟೆಲ್ ರವಿ ತಮ್ಮ ಆಪ್ತರೊಂದಿಗೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರ ಬಳಿ ತೆರಳಿದ್ದರು. ನ್ಯಾಯ ಕೇಳುತ್ತಿದ್ದ ಸಂದರ್ಭ ಕುಸಿದು ಬಿದ್ದ ರವಿ ಅವರಿಗೆ ಪಾರ್ಶ್ವವಾಯು ತಗುಲಿದೆ. ಕುಪ್ಪಂ ಪಿಇಎಸ್ ಕಾಲೇಜಿನ ತೀರ್ವ ನಿಗಾ ಘಟಕದಲ್ಲಿ ದಾಖಲು ಮಾಡಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದರು.
ಈ ಘಟನೆ ಹಿಂದೆ ಅರುಣಾಚಲಂ ಮಣಿ ಅವರ ಕೈವಾಡ ಇರುವುದು ತಿಳಿಯುತ್ತದೆ. ಹಲ ಬಾರಿ ವೈಯುಕ್ತಿಕ ದ್ವೇಷದಿಂದ ರವಿ ಅವರ ವಿರುದ್ಧ ಪಿತೂರಿ ಮಾಡಿದ್ದರು. ಆಗಾಗ ತಮ್ಮ ಹಿಂಬಾಲಕರು ಹಾಗೂ ಅಧಿಕಾರಿಗಳನ್ನು ಕಳುಹಿಸಿ ದಬಾಯಿಸುತ್ತಿದ್ದರು ಎಂದು ದೂರಿದರು.
ಪುರಸಭೆಯ ಎಲ್ಲ ನೋಟಿಸುಗಳಿಗೂ ಸಮರ್ಪಕ ಉತ್ತರ ನೀಡಲಾಗಿದೆ. ಆದರೂ ಈ ರೀತಿಯ ದೌರ್ಜನ್ಯ ಮಾಡಿರುವುದು ಅಪರಾಧ. ಲೈಸೆನ್ಸ್ ಹೊಂದಿದ್ದು, ತೆರೆಗೆ ಕಟ್ಟಿದ್ದರೂ ಸಮುದಾಯದ ಅಮಾಯಕ ವ್ಯಾಪಾರಿ ಮೇಲೆ ದೌರ್ಜನ್ಯ ಮಾಡಿ, ಕಿರುಕುಳ ನೀಡಲಾಗಿದೆ. ಮುಂದೇನಾದರೂ ಆರೋಪಿಗಳೇ ಹೊಣೆ ಎಂದರು. ಸಂಘದ ಪದಾಧಿಕಾರಿಗಳು ಇದ್ದರು.