ಕೋಲಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಸೆ.25ರಂದು ಭೇಟಿ ನೀಡುವ ಹಿನ್ನೆಲೆಯಲ್ಲಿ, ಬಾಯಾರಿದ ಜನಕ್ಕೆ ಅವರಿಂದ ಭರವಸೆ ಕೊಡಿಸಲು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ಎಲ್ಲ ಶಾಸಕರು ಸಿದ್ಧತೆ ನಡೆಸಿದ್ದಾರೆ.
ಅಸಮರ್ಪಕ ಮಳೆ ಮತ್ತು ಅಂತರ್ಜಲ ಕುಸಿತದಿಂದ ಕಂಗಾಲಾಗಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹನಿ ನೀರಾವರಿ ಕಡ್ಡಾಯಗೊಳಿಸುವುದು, ಅದಕ್ಕೆ ಶೇ 100ರಷ್ಟು ಸಹಾಯಧನ ನೀಡುವುದು, ಸೌರಶಕ್ತಿ ಬಳಕೆ– ಶೇ 75 ಸಬ್ಸಿಡಿ ಕೊಡುವುದು, ಕೆರೆಗಳ ಪುನಶ್ಚೇತನ ಪ್ರಕ್ರಿಯೆ ಚುರುಕುಗೊಳಿಸುವ ಭರವಸೆಯನ್ನು ಮುಖ್ಯಮಂತ್ರಿಯಿಂದ ಕೊಡಿಸಲು ಭರದ ಸಿದ್ಧತೆ ನಡೆದಿದೆ. ಅದಲ್ಲದೆ, ಜಿಲ್ಲೆ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತೂ ವರದಿಯೊಂದನ್ನು ಸಿದ್ಧಪಡಿಸಿ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳೊಡನೆ ಸಮಾಲೋಚನೆಯೂ ನಡೆದಿದೆ.
ಸೆ.27ರಂದು ನಿಗದಿಯಾಗಿದ್ದ ಭೇಟಿ ಕಾರ್ಯಕ್ರಮ ಭಾನುವಾರ ಸಂಜೆ ದಿಢೀರ್ ಬದಲಾಗಿ, ಸೆ.25ಕ್ಕೇ ಮುಖ್ಯಮಂತ್ರಿ ಭೇಟಿ ಕಾರ್ಯಕ್ರಮ ನಿಗದಿ ಮಾಡಲಾಗಿದೆ. ಎರಡು ದಿನ ಅಷ್ಟೇ ಕಾಲಾವಕಾಶ ಇರುವ ಹಿನ್ನೆಲೆಯಲ್ಲಿ ಸಚಿವರು ಮತ್ತು ಶಾಸಕರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸಮಾಲೋಚನೆ ನಡೆಸಿದರು.
ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಸ್ಪಷ್ಟ ನಿಲುವು ಏನೆಂಬುದನ್ನು ಮುಖ್ಯಮಂತ್ರಿಗಳು ತಮ್ಮ ಭೇಟಿ ಸಂದರ್ಭದಲ್ಲಿ ಪ್ರಕಟಿಸುತ್ತಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪರಮಶಿವಯ್ಯ ವರದಿ ಜಾರಿಗೆ ಸಿದ್ಧತೆ ನಡೆದಿದೆ.
ಅದರದ್ದೇ ಭಾಗವಾಗಿರುವ ಎತ್ತಿನ ಹೊಳೆ ಯೋಜನೆಯ ಸಮಗ್ರ ಯೋಜನಾ ವರದಿ ತಯಾರಿಕೆಗೂ ಚಾಲನೆ ನೀಡಲಾಗುತ್ತಿದೆ. ಈ ನಡುವೆ, ಯಾವಾಗ ಯೋಜನೆಗಳು ಪೂರ್ಣಗೊಂಡು ಜಿಲ್ಲೆ ಜನರಿಗೆ ನೀರು ದೊರಕುತ್ತದೆ ಎಂಬ ಬಗ್ಗೆ ಸ್ಪಷ್ಟ ಅಭಿಪ್ರಾಯವನ್ನು ಹೇಳಲು ಮುಖ್ಯಮಂತ್ರಿಯನ್ನು ಕೋರಲಾಗುವುದು ಎಂದರು.
ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸದೆ ಜಿಲ್ಲೆಯ ಜನಪ್ರತಿನಿಧಿಗಳು ಜನರ ಬಳಿಗೆ ಹೋಗಲಾಗುವುದಿಲ್ಲ. ಅವರ ಆಕ್ಷೇಪಣೆಗಳಿಗೆ ಉತ್ತರಿಸಲೂ ಸಾಧ್ಯವಾಗುವುದಿಲ್ಲ. ಯಾವುದೇ ಚುನಾವಣೆ ಬರಲಿ, ಹೋಗಲಿ. ನೀರಾವರಿ ಸೌಕರ್ಯವನ್ನು ಜಿಲ್ಲೆಗೆ ತರಲೇಬೇಕಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಭೇಟಿಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿಗಳ ಭೇಟಿ ನಗೆಪಾಟಲು ಆಗಬಾರದು. ಅವರ ಭೇಟಿ ಕಾರಣದಿಂದ ಜನರಲ್ಲಿ ಮೂಡಿರುವ ನಿರೀಕ್ಷೆಗಳು ಈಡೇರಬೇಕು. ಹೀಗಾಗಿ ಜಿಲ್ಲೆಯ ಎಲ್ಲ ಶಾಸಕರು ಪಕ್ಷಭೇದ ಮರೆತು ಒಟ್ಟಾಗಿದ್ದಾರೆ ಎಂದರು.
ಸಿಎಂಗೆ ಮನವಿ: ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ತಮ್ಮ ಮೊಬೈಲ್ ಫೋನ್ ಮೂಲಕ ಸಂಪರ್ಕಿಸಿದ ಶ್ರೀನಿವಾಸಪುರ ಕ್ಷೇತ್ರದ ಶಾಸಕ ಕೆ.ಆರ್.ರಮೇಶಕುಮಾರ್, ಭೇಟಿ ಸಂದರ್ಭದಲ್ಲಿ ಜಿಲ್ಲೆಯ ಸಮಸ್ಯೆಗಳ ಪರಿಹಾರದ ಕುರಿತು ಸ್ಪಷ್ಟವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು ಎಂದು ಕೋರಿದರು.
ಅಸಮರ್ಪಕ ಮಳೆ ಮತ್ತು ಅಂತರ್ಜಲ ಕುಸಿತದಿಂದ ಕಂಗಾಲಾಗಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹನಿ ನೀರಾವರಿಯನ್ನು ಕಡ್ಡಾಯಗೊಳಿಸಬೇಕು, ಅದಕ್ಕೆ ಶೇ 100ರಷ್ಟು ಸಹಾಯಧನ ನೀಡಬೇಕು. ಸೌರಶಕ್ತಿ ಬಳಕೆ– ಶೇ 75 ಸಬ್ಸಿಡಿ ಕೊಡುವ ಭರವಸೆಯನ್ನು ನೀಡಬೇಕು ಎಂದು ಅವರು ವಿನಂತಿಸಿದರು.
ಶಾಶ್ವತ ನೀರಾವರಿ ಯೋಜನೆಗಳು ಜಾರಿಗೊಳ್ಳುವ ಹೊತ್ತಿಗೆ ಕೆರೆಗಳ ಪುನಶ್ಚೇತನವೂ ನಡೆಯಬೇಕು. ಹರಿದು ಬರುವ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಕೆರೆಗಳಿಗೆ ತರಬೇಕು. ಆ ನಿಟ್ಟಿನಲ್ಲಿ ಸಮಗ್ರ ಯೋಜನಾ ವರದಿಯನ್ನು ತಯಾರಿಸುವ ಪ್ರಕ್ರಿಯೆ ಚುರುಕಾಗಬೇಕಿದೆ. 11 ಸಾವಿರ ಕೋಟಿ ರೂಪಾಯಿ ಕೇಂದ್ರ ಸರ್ಕಾರಕ್ಕೆ ದೊಡ್ಡ ಮೊತ್ತವಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳೊಡನೆ ಸಭೆ ನಡೆಸಬೇಕು ಎಂದು ಅವರು ಕೋರಿದರು.
ರೈಲ್ವೆ ಕೋಚ್: ಶ್ರೀನಿವಾಸಪುರ ತಾಲ್ಲೂಕಿನಲ್ಲಿ ರೈಲ್ವೆ ಕೋಚ್ ಕಾರ್ಖಾನೆ ಸ್ಥಾಪನೆಗಾಗಿ 600 ಎಕರೆ ಭೂಮಿ ಸಿದ್ಧವಿದೆ. ಕೈಗಾರಿಕಾ ಅಭಿವೃದ್ಧಿ ಮಂಡಳಿ ಈ ಸಮಯದಲ್ಲಿ ಹೆಚ್ಚು ಕ್ರಿಯಾಶೀಲಗೊಳ್ಳಬೇಕಿದೆ. ಆ ನಿಟ್ಟಿನಲ್ಲಿಯೂ ಭೇಟಿ ಸಂದರ್ಭದಲ್ಲಿ ಭರವಸೆ ನೀಡಬೇಕು ಎಂದು ಅವರು ಮನವಿ ಮಾಡಿದರು.
ಶಾಸಕರಾದ ಬಂಗಾರಪೇಟೆ ಕ್ಷೇತ್ರದ ಕೆ.ಎಂ.ನಾರಾಯಣಸ್ವಾಮಿ, ಮಾಲೂರು ಕ್ಷೇತ್ರದ ಕೆ.ಎಸ್.ಮಂಜುನಾಥ, ಮುಳಬಾಗಲು ಕ್ಷೇತ್ರದ ಡಾ.ಜಿ.ಮಂಜುನಾಥ ಮತ್ತು ಜಿಲ್ಲಾಧಿಕಾರಿ ಡಿ.ಕೆ.ರವಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.