ಕನಕಗಿರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ, ಕಾರ್ಮಿಕ ಹಾಗೂ ಕೂಲಿಕಾರರ ವಿರೋಧಿ ನೀತಿಗಳನ್ನು ರೂಪಿಸುತ್ತಿವೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಸಿಐಟಿಯು ಕಾರ್ಯಕರ್ತರು ಇಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಹುಸೇನಪ್ಪ, ಸಿಐಟಿಯು ಅಧ್ಯಕ್ಷ ಮಲ್ಲಪ್ಪ ಮ್ಯಾಗಡೆ ಮಾತನಾಡಿ,‘ಅಗತ್ಯ ವಸ್ತುಗಳು, ಇಂಧನ ಬೆಲೆ ಗಗನಕ್ಕೆ ಏರಿದರೂ ಕೇಂದ್ರ ಸರ್ಕಾರ ಮೌನ ವಹಿಸಿದೆ. ಬೆಲೆ ಏರಿಕೆಯ ಪರಿಣಾಮ ರೈತರು, ಬಡವರು, ಕೂಲಿಕಾರರು ಜೀವನ ನಡೆಸುವುದು ಕಷ್ಟದಾಯಕವಾಗಿದೆ’ ಎಂದು ದೂರಿದರು.
‘ನರೇಗಾ ಕೂಲಿಕಾರರಿಗೆ ಪ್ರತಿದಿನ ₹600 ಕೂಲಿ ನೀಡಬೇಕು. ವರ್ಷದಲ್ಲಿ 200 ದಿನ ಕೆಲಸ ನೀಡಬೇಕು’ ಎಂದು ಅವರು ಒತ್ತಾಯಿಸಿದರು.
ಕೊರೊನಾ ಸಮಯದ ಏಪ್ರಿಲ್ ಹಾಗೂ ಮೇ ತಿಂಗಳ ವೇತನ ನೀಡಬೇಕು. ಬಿಸಿಯೂಟ ನೌಕರರು ಹಾಗೂ ಅವರ ಕುಟುಂಬ ವರ್ಗದವರಿಗೆ ಲಸಿಕೆ ನೀಡಿ ಜೀವ ಉಳಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಪ್ರತಿಯೊಂದು ಕುಟುಂಬಕ್ಕೆ ತಿಂಗಳಿಗೆ ₹10 ಸಾವಿರ ನೀಡಬೇಕು ಎಂದು ಮನವಿ ಮಾಡಿದರು.
ಸಿಐಟಿಯು ಕಾರ್ಯದರ್ಶಿ ನಬೀಸಾಬ ಚಳಿಮರದ, ಬಿಸಿಯೂಟ ಯೋಜನೆ ಸಂಘಟನೆಯ ಪ್ರಮುಖರಾದ ಶಾಂತಮ್ಮ , ಹನುಮಮ್ಮ, ಪಾಮಣ್ಣ, ನಿಂಗಪ್ಪ, ಹೊನ್ನಪ್ಪ ಹೊನ್ನೂರಸಾಬ, ಅಲ್ಲಸಾಬ, ಹುಸೇನಪ್ಪ ಹಾಗೂ ಪರಶುರಾಮ ಇದ್ದರು.