ಕೊಪ್ಪಳ: ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ನೇತೃತ್ವದ ತಂಡ ಜಿಲ್ಲೆಯ ಹಲವು ಕಡೆ ಮಂಗಳವಾರ ಭೇಟಿ ನೀಡಿ ಅವಲೋಕನ ನಡೆಸಿತು.
ಇದಕ್ಕೂ ಮೊದಲು ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರೊಂದಿಗೆ ಚರ್ಚಿಸಿ ಜಿಲ್ಲೆಯಲ್ಲಿ ಬಿದ್ದ ಮಳೆ, ಬರ ಪರಿಹಾರ, ಇದನ್ನು ನಿರ್ವಹಿಸಲು ಸರ್ಕಾರ ನೀಡಿರುವ ಹಣ, ಅಧಿಕಾರಿಗಳು ಕ್ಷೇತ್ರಕ್ಕೆ ಹೋಗಿ ರೈತರ ಸಮಸ್ಯೆ ಆಲಿಸಿದ್ದಾರೆಯೇ ಎನ್ನುವ ಮಾಹಿತಿಯನ್ನು ಈಶ್ವರಪ್ಪ ಕಲೆ ಹಾಕಿದರು.
ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರೊಂದಿಗೆ ಚರ್ಚಿಸಿ ’ತುಂಗಭದ್ರಾ ಜಲಾಶಯದಲ್ಲಿ ನೀರಿನ ಲಭ್ಯತೆ ಬಹಳಷ್ಟು ಕಡಿಮೆಯಿದೆ. ಆದ್ದರಿಂದ ಕಾರ್ಖಾನೆಗಳಿಗೆ ನೀರು ನಿಲ್ಲಿಸಬೇಕು’ ಎಂದು ಆಗ್ರಹಿಸಿದರು. ಇದಕ್ಕೆ ಸಚಿವರು ’20 ದಿನಗಳ ಹಿಂದೆಯೇ ನೀರು ನಿಲ್ಲಿಸಲಾಗಿದೆ. ರೈತರಿಗೆ ನೀರು ಕೊಡುವುದೇ ನಮಗೆ ಮೊದಲ ಆದ್ಯತೆಯಾಗಿದೆ’ ಎಂದರು. ಇದೇ ವೇಳೆ ಬಂದ ಸಚಿವ ಕೃಷ್ಣ ಬೈರೇಗೌಡ ಜೊತೆ ಕುಶಲೋಪರಿ ಚರ್ಚಿಸಿದರು.
ಮಾಜಿ ಸಚಿವ ಹಾಲಪ್ಪ ಆಚಾರ್, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಶಾಸಕ ದೊಡ್ಡನಗೌಡ ಪಾಟೀಲ ಇದ್ದರು