ಕಾರಟಗಿ: ‘ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಎಲ್ಲರೂ ಅದನ್ನು ಪಡೆದು, ಕೋವಿಡ್ ನಿರ್ಮೂಲನೆಗೆ ಕೈಜೋಡಿಸಬೇಕು’ ಎಂದು ಶಾಸಕ ಬಸವರಾಜ ದಢೇಸೂಗುರು ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ನಡೆದ ಬೂಸ್ಟರ್ ಡೋಸ್ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,‘3ನೇ ಅಲೆಯ ವೇಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಲಸಿಕೆ ಹಾಕಿಸಿಕೊಂಡವರು ನಿರ್ಲಕ್ಷ್ಯ ಮಾಡದೇ, ಅವಧಿ ಮುಗಿದಿದ್ದರೆ ಬೂಸ್ಟರ್ ಡೋಸ್ ಪಡೆಯಲು ಮುಂದಾಗಬೇಕು’ ಎಂದರು.
ಆಡಳಿತ ವೈದ್ಯಾಧಿಕಾರಿ ಶಕುಂತಲಾ ಪಾಟೀಲ ಮಾತನಾಡಿ,‘ಎಲ್ಲ ಕಡೆ ಕೋವಿಡ್ ಹಾಗೂ ಓಮೈಕ್ರಾನ್ ಹೆಚ್ಚಾಗುತ್ತಿದೆ. ಸಾರ್ವಜನಿಕರು ಕಡ್ಡಾಯವಾಗಿ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಬೇಕು’ ಎಂದು ಹೇಳಿದರು.
ಡಾ. ನಾಗರಾಜ, ಆರೋಗ್ಯ ಇಲಾಖೆಯ ರಮೇಶ ಇಲ್ಲೂರ, ಆಪ್ತ ಸಮಾಲೋಚಕ ಹನುಮಂತಪ್ಪ, ಶರಣಪ್ಪ ಚಳ್ಳೂರ, ರಮೇಶ ನಾಡಗೌಡ, ನವೀನ್, ಆರೋಗ್ಯ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.