ಕುಷ್ಟಗಿ: ಪಟ್ಟಣದ 3ನೇ ವಾರ್ಡ್ನಲ್ಲಿರುವ ರಾಜಕಾಲುವೆ ನಿರ್ಮಾಣಕ್ಕೆ ಅಡ್ಡಿಯಾಗಿರುವ ಒತ್ತುವರಿ ಆಗಿರುವ ಜಾಗದ ತೆರವು ಕಾರ್ಯಾಚರಣೆಗೆ ಅಧಿಕಾರಿಗಳು ನಿಖರ ಮಾಹಿತಿಯಿಲ್ಲದೇ ಬಂದಿದ್ದರಿಂದ ಮೂರನೇ ಬಾರಿಯೂ ಒತ್ತುವರಿ ತೆರವು ಸಾಧ್ಯವಾಗಲಿಲ್ಲ.
ಮುಖ್ಯಾಧಿಕಾರಿ ಧರಣೇಂದ್ರ ಕುಮಾರ ಸೇರಿದಂತೆ ಸದಸ್ಯರು ಹಾಗೂ ಸಿಬ್ಬಂದಿ ಮಂಗಳವಾರ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದರು. 3–4 ಸರ್ವೆ ಸಂಖ್ಯೆಯಲ್ಲಿ ನಾಲೆ ಹಾದುಹೋಗಿದ್ದು, ಮಳೆ ನೀರಿನ ಕಾಲುವೆ ಈಗ ಚರಂಡಿ ರೂಪ ಪಡೆದಿದೆ. ಕೊಳಚೆ ನೀರು ಹರಿದು ಹೋಗುವುದಕ್ಕೆ ಪುರಸಭೆ ಕಾಂಕ್ರೀಟ್ ಚರಂಡಿ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕಾಗಿ ಕೆಕೆಆರ್ಡಿಬಿಯಿಂದ ಎರಡು ವರ್ಷದ ಹಿಂದೆಯೇ ₹ 35 ಲಕ್ಷ ಅನುದಾನವೂ ಬಿಡುಗಡೆಯಾಗಿದೆ. ಆದರೆ ಕಾಲುವೆಯನ್ನು ಅನೇಕ ಜನರು ಎಲ್ಲೆಂದರಲ್ಲಿ ಮನಬಂದಂತೆ ಒತ್ತುವರಿ ಮಾಡಿಕೊಂಡಿದ್ದು, ಕಾಲುವೆ ಎಲ್ಲಿ, ಎಷ್ಟು ವ್ಯಾಪ್ತಿಯಲ್ಲಿದೆ ಎಂಬ ಮಾಹಿತಿಯೇ ಪುರಸಭೆ ಅಧಿಕಾರಿಗಳ ಬಳಿ ಇರಲಿಲ್ಲ.
ಪೂರ್ವ ಸಿದ್ಧತೆ ಇಲ್ಲದೆ ಅಸಮರ್ಪಕ ರೀತಿಯಲ್ಲಿ ಒತ್ತುವರಿ ತೆರವಿಗೆ ಜೆಸಿಬಿ ಯಂತ್ರದೊಂದಿಗೆ ಸ್ಥಳಕ್ಕೆ ಬಂದ ಪುರಸಭೆ ಅಧಿಕಾರಿಗಳು, ಸದಸ್ಯರು ಮತ್ತು ಸಿಬ್ಬಂದಿ ಸಾರ್ವಜನಿಕರ ಆಕ್ಷೇಪಕ್ಕೆ ಗುರಿಯಾಗಬೇಕಾಯಿತು. ಅನೇಕ ವ್ಯಕ್ತಿಗಳು ಕಾಲುವೆ ಜಾಗದಲ್ಲಿ ನಿವೇಶನ ಹಾಕಿದ್ದಾರೆ. ಇನ್ನೂ ಕೆಲವರು ಕಾಲುವೆಯಲ್ಲಿಯೇ ಮನೆ, ಆವರಣಗೋಡೆ ನಿರ್ಮಿಸಿಕೊಂಡಿದ್ದಾರೆ. ಅವುಗಳನ್ನು ತೆರವುಗೊಳಿಸದೆ ಅಮಾಯಕರ ನಿವೇಶನಗಳಲ್ಲಿಯೇ ರಾಜಕಾಲುವೆ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಸ್ಥಳದಲ್ಲಿ ಜಮಾಯಿಸಿದ ಜನರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಕಾಲುವೆಯ ಜಾಗವನ್ನು ಸ್ಪಷ್ಟವಾಗಿ ಗುರುತಿಸಿ, ಒತ್ತುವರಿ ಮಾಡಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಮುಲಾಜಿಲ್ಲದೆ ತೆರವುಗೊಳಿಸಿ ಕಾಲುವೆ ನಿರ್ಮಿಸುವಂತೆ ಪಟ್ಟು ಹಿಡಿದಿದ್ದರು.
ಜಿಲ್ಲಾಡಳಿಕ್ಕೆ ಪತ್ರ: ಸ್ಥಳದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಮುಖ್ಯಾಧಿಕಾರಿ ಧರಣೇಂದ್ರಕುಮಾರ, ಕಾಲುವೆಯ ಜಾಗ ಒತ್ತುವರಿಯಾಗಿರುವುದು ಎಷ್ಟು ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಪತ್ರ ಬರೆದು ಮಾರ್ಗದರ್ಶನ ಕೋರಲಾಗುವುದು ಎಂದು ತಿಳಿಸಿದರು.
ಸದಸ್ಯರಾದ ಮೈನುದ್ದೀನ್ ಮುಲ್ಲಾ, ಜಿ.ಕೆ. ಹಿರೇಮಠ ಇದ್ದರು.
ಪ್ರಭಾವಿಗಳ ಅಕ್ರಮ ಕಟ್ಟಡ ತೆರವಿಗೆ ಪುರಸಭೆ ಹಿಂದೇಟು: ಆರೋಪ ಎರಡು ವರ್ಷಗಳಾದರೂ ಒತ್ತುವರಿ ಗುರುತಿಸುವಲ್ಲಿ ವಿಫಲ ಖರ್ಚಾಗದ ಕೆಕೆಆರ್ಡಿಬಿಯ ₹ 35 ಲಕ್ಷ ಅನುದಾನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.