ಯಲಬುರ್ಗಾ: ತಾಲ್ಲೂಕಿನ ನೆಲಜೇರಿ ಗ್ರಾಮದಲ್ಲಿ ನಮ್ಮ ಮನೆಯಿದ್ದು, ಲಾಕ್ಡೌನ್ ಘೋಷಣೆಯಾದ ದಿನದಿಂದಲೂ ಇಂದಿಗೂ ಮನೆಗೆ ಹೋಗಿಲ್ಲ. ತಂದೆ– ತಾಯಿಯ ಮುಖ ನೋಡಿಲ್ಲ. ತೋಟದ ಮನೆಯಲ್ಲಿಯೇ ವಾಸವಾಗಿದ್ದು, ಅಲ್ಲಿಂದಲೇ ಕಚೇರಿಗೆ ಹೋಗಿ, ಕೊರೊನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದೇನೆ.
ಇಲ್ಲಿನ ಹಿರೇವಂಕಲಕುಂಟಾ ಹೋಬಳಿಯಲ್ಲಿ ಜನರಿಗೆ ಕೊರೊನಾ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ಜೊತೆಗೆ ಸಂಕಷ್ಟದಲ್ಲಿ ಇರುವವರಿಗೆ ಅಗತ್ಯ ದಿನಸಿ ಕಿಟ್ಗಳನ್ನು ವಿತರಿಸಿದ್ದೇನೆ. ಕೊರೊನಾ ವಿಪತ್ತು ನಿಧಿಗೆ ವೈಯಕ್ತಿಕವಾಗಿ ₹ 5 ಲಕ್ಷ ದೇಣಿಗೆ ನೀಡಿದ್ದೇನೆ.
ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕಿರೊಂದಿಗೆ ಮನೆ ಮನೆಗೆ ತೆರಳಿ ಕೊರೊನಾ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ, ಎಚ್ಚರಿಕೆಯಿಂದ ಇರುವಂತೆ ಸೂಚಿಸುತ್ತಿದ್ದೇನೆ. ಜೊತೆಗೆ ಕೃಷಿ ಚಟುವಟಿಕೆ ಕೈಗೊಂಡಿದ್ದ ರೈತರ ಬಳಿ ಹೋಗಿ ಅವರಲ್ಲಿಯೂ ಈ ಬಗ್ಗೆ ಅರಿವು ಮೂಡಿಸುತ್ತಿದ್ದೇನೆ.