ಕೊಪ್ಪಳ: ತಾಲ್ಲೂಕಿನತಾಲೂಕಿನ ಡೊಂಬರಳ್ಳಿ ಗ್ರಾಮದ ಮಾರುತೇಶ್ವರ ನೂತನ ರಥೋತ್ಸವ ಸೋಮವಾರ ಸಂಪನ್ನಗೊಂಡಿತು.
ಕಳೆದ ಹತ್ತಾರು ದಿನದಿಂದ ಗ್ರಾಮಸ್ಥರಲ್ಲಿ ಜಾತ್ರೆ ಸಂಭ್ರಮ ಮನೆ ಮಾಡಿತ್ತು. ಅದರಲ್ಲೂ ಈ ವರ್ಷ ಗ್ರಾಮದ ಮಾರುತೇಶ್ವರ ದೇವರ ಜಾತ್ರೆಗೆ ನೂತನ ರಥ ನಿರ್ಮಾಣಗೊಂಡಿದ್ದು, ಜನರು ನೂತನ ರಥೋತ್ಸವ ಕಣ್ತುಂಬಿಕೊಳ್ಳಲು ಹಾತೊರೆಯುತ್ತಿದ್ದರು.
ಬೆಳಿಗ್ಗೆಯಿಂದಲೇ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ದೇವಸ್ಥಾನದಲ್ಲಿ ವಿಶೇಷ ಪೂಜೆ ಜರುಗಿದವು. ಗ್ರಾಮಸ್ಥರು ಮಡಿ-ಉಡಿಯಿಂದ ಭಕ್ತಿ ಸಮರ್ಪಿಸಿದರು. ಮಧ್ಯಾಹ್ನದಿಂದಲೇ ಡೊಳ್ಳು ಕುಣಿತ, ನಾನಾ ಪೂಜಾ ಕಾರ್ಯಕ್ರಮ ನೂತನ ರಥೋತ್ಸವ ನಿಮಿತ್ತ ಜರುಗಿದವು.
ಕಬ್ಬಿಣದಿಂದ ಮಾಡಿಸಿದ ರಥ ಗ್ರಾಮದ ಹಿರಿಮೆ ಸಾರುತ್ತಿತ್ತು. ಡೊಂಬರಳ್ಳಿ, ಸುತ್ತಲಿನ ಗ್ರಾಮದ ಜನರು ರಥೋತ್ಸವಕ್ಕೆ ಬಂದಿದ್ದರು. ಸಂಜೆಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಮೈನಳ್ಳಿಸಿದ್ಧೇಶ್ವರ ಸ್ವಾಮೀಜಿ ನೂತನ ರಥೋತ್ಸವಕ್ಕೆ ಚಾಲನೆ ನೀಡಿದರು.
ಗ್ರಾಮದ ರಾಜಬೀದಿಯಲ್ಲಿ ಭಕ್ತರ ಸಮ್ಮುಖದಲ್ಲಿ ಸಕಲ ವಾದ್ಯ ಮೇಳದೊಂದಿಗೆ ನೂತನ ರಥ ಸಾಗಿತು.ಮಾರುತೇಶ್ವರ ಮಹಾರಾಜಕಿ ಜೈ ಎಂಬ ಘೋಷ ವಾಕ್ಯ ಮುಗಿಲು ಮುಟ್ಟಿತು.
ನಂತರ ಧರ್ಮ ಸಂದೇಶ ನೀಡಿದ ಗವಿಶ್ರೀ, 'ಶ್ರಮ ಹಾಗು ಕಾಯಕಕ್ಕೆ ಡೊಂಬರಳ್ಳಿ ಭಕ್ತರು ಮಾದರಿ.ಇಲ್ಲಿ ನೂತನ ರಥೋತ್ಸವ ಜರುಗಿರುವುದು ಗ್ರಾಮದ ಹಿರಿಮೆ ಸಂಕೇತ. ಭಕ್ತಿಯಿಂದ ಇದ್ದರೆ ನೆಮ್ಮದಿ ಪ್ರಾಪ್ತಿ. ಡೊಂಬರಳ್ಳಿ ಗ್ರಾಮ ಶ್ರದ್ಧಾ, ಭಕ್ತಿಗೆ ಹೆಸರಾಗಿದೆ ಎಂದರು.
ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಬಿಜೆಪಿ ರಾಷ್ಟ್ರೀಯ ಸದಸ್ಯ ಸಿ.ವಿ.ಚಂದ್ರಶೇಖರ್ ಮುಂತಾದವರು ಇದ್ದರು.