ಯಲಬುರ್ಗಾ: ‘ಗ್ರಾಮೀಣ ಪ್ರದೇಶದಲ್ಲಿ ಜಾನಪದ ಕಲಾವಿದರಿಗೆ ಕೊರತೆಯಿಲ್ಲ. ಆದರೆ ಸರಿಯಾದ ಗೌರವ ಮತ್ತು ಸೂಕ್ತ ಪ್ರೋತ್ಸಾಹ ಸಿಗದಿರುವ ಕಾರಣ ಎಲೆಮರೆಯ ಕಾಯಿಯಂತಾಗಿದ್ದಾರೆ’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಹೇಳಿದರು.
ತಾಲ್ಲೂಕಿನ ಮ್ಯಾದನೇರಿ ಗ್ರಾಮದ ರಂಗಭೂಮಿ ಮತ್ತು ಸಾಂಸ್ಕೃತಿಕ ಕಲಾಸಂಘ ಈಚೆಗೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಲಾವಿದರ ಬೀಡಾದ ಕರುನಾಡಿನ ದಶದಿಕ್ಕುಗಳಲ್ಲಿ ವೈವಿಧ್ಯಮಯ ಜಾನಪದ ಕಲಾ ಪ್ರಕಾರಗಳನ್ನು ಅಸ್ತಿತ್ವದಲ್ಲಿವೆ. ಅವುಗಳನ್ನು ಉಳಿಸಿ ಬೆಳೆಸಿ ಶ್ರೀಮಂತಗೊಳಿಸುತ್ತಿರುವ ಜನಪದ ಕಲಾವಿದರಿದ್ದಾರೆ. ಜಾನಪದ ಸಂಸ್ಕೃತಿಯ ಉಳಿವು -ಅಳಿವು ಅವರ ಕೈಯಲ್ಲಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಡಿ.ಎಸ್.ಪೂಜಾರ ಮಾತನಾಡಿ,‘ಅಧ್ಯಕ್ಷರು, ಗ್ರಾಮೀಣ ಕಲಾವಿದರಿಗೆ ಸೌಲಭ್ಯ ಒದಗಿಸಲು ಪ್ರಯತ್ನಿಸಬೇಕು’ ಎಂದು ಮನವಿ ಮಾಡಿದರು.
ಜಾನಪದ ಗಾಯಕ ಎಚ್. ಚಂದ್ರಶೇಖರ ಲಿಂಗದಳ್ಳಿ, ಕನಕಪ್ಪ ಕಲ್ಲಹೊಲದ, ಹನಮಂತಪ್ಪ ಹೊಸೂರ, ಚನ್ನಬಸಪ್ಪ ಕುದ್ರಿಕೊಟಗಿ, ರುದ್ರಪ್ಪ ವದ್ನಾಳ, ಕುಂಟೆಪ್ಪ ಕೊನೇರಿ, ಬಸವರಾಜ, ದೊಡ್ಡಪ್ಪ ಹೊಸ್ಮನಿ, ಕಲ್ಲಗೋಡಿ, ಸಿದ್ದಪ್ಪ ಮೇಟಿ ಹಾಗೂ ಮಂಜುನಾಥ ಹರಿಜನ ಇದ್ದರು.