ಕೊಪ್ಪಳ: ಮಹಾಮಾರಿ ಕೊರೊನಾ ತಡೆಗಟ್ಟಲುಸರ್ಕಾರದ ಮಾರ್ಗಸೂಚಿ ಪ್ರತಿಯೊಬ್ಬರು ಪಾಲಿಸಬೇಕು. ಕೋವಿಡ್ ತಡೆಗಟ್ಟಲು ಪ್ರತಿಯೊಬ್ಬರು ಕೋವಿಡ್ ಲಸಿಕೆ ಹಾಕಿಸಿಕೊಂಡು ಕೊರೊನಾ ತಡೆಗಟ್ಟಲು ಸಹಕರಿಸಬೇಕು ಎಂದುಯುಸೂಫಿಯಾ ಮಸೀದಿಯ ಪೇಶ್ ಇಮಾಮ್ ಮುಫ್ತಿ ಮೌಲಾನಾ ಮೊಹಮ್ಮದ್ ನಜೀರ್ ಅಹ್ಮದ್ ಖಾದ್ರಿ-ವ-ತಸ್ಕೀನಿ ಸಮಾಜದ ಜನರಿಗೆ ಮನವಿ ಮಾಡಿದರು.
ಅವರು ನಗರದ ಯುಸೂಫಿಯಾ ಮಸೀದಿಯ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಮಸೀದಿ ಆಡಳಿತ ಕಮಿಟಿ ಆಶ್ರಯದಲ್ಲಿ ಏರ್ಪಡಿಸಿದ್ದ ಲಸಿಕಾ ಅಭಿಯಾನದಲ್ಲಿಲಸಿಕೆ ಹಾಕಿಸಿ ಕೊಂಡು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೊರೊನಾ ತಡೆಗಟ್ಟಲು ಮಾಸ್ಕ್ ಧರಿಸಿ, ವೈಯಕ್ತಿಕ ಅಂತರ ಕಾಯ್ದುಕೊಂಡು ಮತ್ತು ಸ್ಯಾನಿಟೈಸರ್ ಬಳಸಿ ತಮ್ಮ ದೈನಂದಿನ ಕಾರ್ಯಚಟುವಟಿಕೆ ಕೈಗೊಳ್ಳಿ. ಸಕಾಲಕ್ಕೆ ಸರ್ಕಾರದಿಂದ ಬರುವ ಎಲ್ಲ ಮಾರ್ಗಸೂಚನೆ ಪಾಲಿಸಿ ಕೋವಿಡ್ ಲಸಿಕೆಯ ಎರಡು ಡೋಸ್ ಹಾಕಿಸಿಕೊಂಡು ಆರೋಗ್ಯವಂತರಾಗಿ ಜೀವನ ನಡೆಸಬೇಕು ಎಂದರು .
ಮಸೀದಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಈ ಲಸಿಕಾ ಅಭಿಯಾನದಲ್ಲಿ 180 ಜನರು ಲಸಿಕೆ ಪಡೆದರು. ಸೆ.15 ರಂದು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಇದೇ ಸ್ಥಳದಲ್ಲಿ ಪುನಃ ಕೋವಿಡ್ ಲಸಿಕಾ ಅಭಿಯಾನ ಜರುಗಿಸಲಾಗುವುದು. ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಘಟಕರು ಮನವಿ ಮಾಡಿದರು.
ವಕ್ಫ್ ನ್ಯಾಯ ಉಪಸಮಿತಿಯ ಅಧ್ಯಕ್ಷ ಎಸ್.ಆಸೀಫ್ ಅಲಿ, ಭಾಷುಸಾಬ್ ಖತೀಬ್,ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಜಾವೀದ್ ಕಂಗೇರಿ, ತಾಲ್ಲೂಕು ಅಧಿಕಾರಿ ಮಹಾಂತೇಶ, ವೈದ್ಯಾಧಿಕಾರಿ ಡಾ.ಮಹೇಶ ಉಮಚಗಿ, ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಶ್ರೀನಿವಾಸ ಕೆ., ರೇಣುಕಾ ಎಚ್., ಶೋಭಾ, ಮಸೀದಿ ಆಡಳಿತ ಮಂಡಳಿ ಪ್ರಭಾರಿ ಅಧ್ಯಕ್ಷ ಮೊಹ್ಮದ್ ಸಲಾವುದ್ದೀನ್ (ಇಕ್ಬಾಲ್), ಕಾರ್ಯದರ್ಶಿ ಹಾಮೀದ್ ಸಿದ್ದೀಕಿ, ಖಜಾಂಚಿ ಸಯ್ಯದ್ ಯಜದಾನಿ ಪಾಷಾ ಖಾದ್ರಿ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.