ಕೊಪ್ಪಳ:ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಗಾಗಿ ಹಾಗೂ ಬರ ದೂರವಾಗುವ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ ಗುರುವಾರ ಬೆಳಗ್ಗೆ ಪರ್ಜನ್ಯ ಹೋಮ, ವಿಶೇಷ ಪೂಜೆ ನೆರವೇರಿಸಲಾಯಿತು.
ಜಿಲ್ಲೆಯ ಪೌರಾಣಿಕ ಪ್ರಸಿದ್ಧ ಹುಲಿಗೆಮ್ಮ ದೇವಸ್ಥಾನದಲ್ಲಿ ಪರ್ಜನ್ಯ ಹೋಮ, ಜಲಾಧಿವಾಸ, ವಿಶೇಷ ಪೂಜೆ ಸಲ್ಲಿಸಿದರೆ ಹನುಮಂತ ಜನಿಸಿದ ಅಂಜನಾದ್ರಿ ಮತ್ತು ಕನಕಗಿರಿಯ ಕನಕಾಚಲಪತಿ ದೇವಸ್ಥಾನದಲ್ಲಿ ಸಂಕಲ್ಪ ಮಾಡಲಾಯಿತು.
ದ್ವಿಜರಿಂದ ಹೋಮ, ಪೂಜೆ ನೆರವೇರಿಸಲಾಯಿತು. ಇಂದು ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಪರ್ಜನ್ಯ ಹೋಮ ಹಮ್ಮಿಕೊಂಡ ಕಾರಣಕ್ಕೆ ಎಲ್ಲಿಯೂ ಸಹ ದ್ವಿಜರು ಸಿಕ್ಕಿರಲಿಲ್ಲ. ಹೀಗಾಗಿ ಹುಲಿಗೆಮ್ಮ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಚಂದ್ರಮೌಳಿ ಅವರು ಹೊಸಪೇಟೆಯಿಂದ ದ್ವಿಜರನ್ನು ಕರೆತಂದು ಹೋಮ ಮಾಡಿಸಿದರು.