ಹನುಮಸಾಗರ: ಸರ್ಕಾರಕ್ಕೆ ಕಲಾವಿದರ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶವೆ ಇಲ್ಲದಂತಾಗಿದೆ. ಆದ್ದರಿಂದ ಕಲಾವಿದರನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳ ಅವಶ್ಯಕತೆ ಇದೆ ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಅಭಿಪ್ರಾಯಪಟ್ಟರು.
ಭಾನುವಾರ ಇಲ್ಲಿನ ಬಾಲಕಿಯರ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಿಸರ್ಗ ಸಂಗೀತ ವಿದ್ಯಾಲಯ, ರಂಗಕಲಾವಿದರ ಸಂಘ, ಪುಟ್ಟರಾಜ ಸ್ವರ ಸಂಗೀತ ಕಲಾ ಸಾಂಸ್ಕೃತಿಕ ಸಂಸ್ಥೆ, ಸಿರಿಗನ್ನಡ ಸಂಗೀತ ಶಿಕ್ಷಣ ಸಂಸ್ಥೆ ಹಾಗೂ ನೂಲಿಯ ಚಂದಯ್ಯ ಕೊರಮ ಕಲಾವಿದರ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಂ.ಪುಟ್ಟರಾಜ ಗವಾಯಿಗಳ 11ನೇ ಪುಣ್ಯಸ್ಮರಣೋತ್ಸವದಲ್ಲಿ ಕಲ್ಯಾಣ ಕರ್ನಾಟಕದ ಕುಷ್ಟಗಿ ತಾಲ್ಲೂಕಿನ ನೋಂದಾಯಿತ ಕಲಾವಿದರಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿದರು.
ರಾಜ್ಯದಲ್ಲಿ ಸದ್ಯ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರನ್ನು ಕಡೆಗಣಿಸಲಾಗುತ್ತಿದೆ. ಹೀಗಾಗಿ ಈ ಭಾಗದ ಕಲಾವಿದರನ್ನು ಸಂಘಟಿ ಸಬೇಕೆಂಬ ಉದ್ದೇಶದಿಂದ ಈ ಒಕ್ಕೂಟ ರಚನೆ ಮಾಡಲಾಗಿದೆ ಎಂದರು.
ಮುಖಂಡ ದೊಡ್ಡಬಸವಗೌಡ ಪಾಟೀಲ ಬಯ್ಯಾಪೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲಾವಿದರಲ್ಲಿ ಶ್ರದ್ಧೆ, ಶ್ರಮ, ನಿರಂತರ ಕಲಿಕೆ ಇದ್ದರೆ ದೊಡ್ಡ ಪ್ರಮಾಣದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರಿದ್ದಾರೆ, ಅವರನ್ನು ಪ್ರೋತ್ಸಾಹಿಸಿದಾಗ ಮಾತ್ರ ಅವರಲ್ಲಿನ ಕಲೆ ಹೊರಬರಲು
ಸಾಧ್ಯ ಎಂದರು.
ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ಮಾತನಾಡಿ, ಕಲಾವಿದರ ನಡುವಿನ ತಾರತಮ್ಯ ನೀತಿ ನಿವಾರಣೆ ಮತ್ತು ಸ್ಥಳೀಯ ಕಲಾವಿದರಿಗೆ ಸೌಕರ್ಯ ಕಲ್ಪಿಸುವುದು, ಎಲ್ಲ ಪ್ರಕಾರದ ಕಲಾವಿದರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ರಚನೆ ಮಾಡಲಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರಂಗಕಲಾವಿದರ ಸಂಘದ ಅಧ್ಯಕ್ಷ ಮಲ್ಲಯ್ಯ ಕೋಮಾರಿ ಹಾಗೂ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಬಸವರಾಜ ಹಳ್ಳೂರ ಮಾತನಾಡಿ, ರಾಜ್ಯ ಸರ್ಕಾರದಿಂದ ನಡೆಯುವ ಉತ್ಸವಗಳಲ್ಲಿ ಕಡ್ಡಾಯವಾಗಿ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರಿಗೆ ಅವಕಾಶ ನೀಡಬೇಕು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಸಂಗಯ್ಯ ವಸ್ತ್ರದ, ವಿಶ್ವನಾಥ ಕನ್ನೂರ, ಕಿಶನರಾವ್ ಕುಲಕರ್ಣಿ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾ ತಂಡಗಳಿಂದ ಪಂ.ಪುಟ್ಟರಾಜ ಗವಾಯಿಗಳ ಭಾವಚಿತ್ರದ ಮೆರವಣಿಗೆ ನಡೆಯಿತು. ತಾಲ್ಲೂಕಿನ ವವಿಧ ಭಾಗಗಳಿಂದ ಸುಮಾರು 300ಕ್ಕೂ ಹೆಚ್ಚು ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಲಾವಿದರಾದ ಹುಚ್ಚಯ್ಯ ಹಿರೇಮಠ, ಜುಮ್ಮನಗೌಡ ಪಾಟೀಲ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಿದರು. ಪಕ್ಕವಾದ್ಯಗಾರರಾಗಿ ಪ್ರತಾಪ ಹಿರೇಮಠ, ಶಂಕರ ಬಸುದೆ, ಸಂಗಮೇಶ ಮನ್ನೇರಾಳ ಸಾಥ್ ನೀಡಿದರು.
ಗ್ರಾ.ಪಂ ಅಧ್ಯಕ್ಷೆ ಶಂಕ್ರಮ್ಮ ನಿರ್ವಾಣಿ, ಉಪಾಧ್ಯಕ್ಷ ಮಂಜುನಾಥ ಹುಲ್ಲೂರ, ಮಹಾಂತೇಶ ಅಗಸಿಮುಂದಿನ, ಕರಿಸಿದ್ದಪ್ಪ ಕುಷ್ಟಗಿ, ಶರಣಪ್ಪ ವಡಗೇರಿ, ಸೂಚಪ್ಪ ಭೋವಿ, ಎಸ್.ಎಸ್.ಹಿರೇಮಠ, ಅಬ್ದುಲ್ಕರೀಮ ವಂಟೆಳಿ, ಶರಣಪ್ಪ ಹುಲ್ಲೂರ, ಅಮರೇಶ ಮಸರಕಲ್, ಲಕ್ಷ್ಮಣ ಪೀರಗಾರ, ಶಿವಪ್ಪ ಕಂಪ್ಲಿ, ಡಿ.ಎಸ್.ಪೂಜಾರ, ಶರಣು ಶೆಟ್ರ, ಮುತ್ತಣ್ಣ ಭಜಂತ್ರಿ ಸೇರಿದಂತೆ ಚುನಾಯಿತ ಹಾಗೂ ಸಂಘಸಂಸ್ಥೆಗಳ ಪ್ರತಿನಿಧಿಗಳು, ಮುಖಂಡರು ಇದ್ದರು.
ಗ್ಯಾನಪ್ಪ ತಳವಾರ ಸ್ವಾಗತಿಸಿದರು. ವೆಂಕಟೇಶ ಹೊಸಮನಿ ನಿರೂಪಿಸಿದರು. ದುರುಗೇಶ ಭಜಂತ್ರಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.