ಕನಕಗಿರಿ: ಕಲಬುರಗಿ ತಾಲ್ಲೂಕಿನ ಕೋಟನೂರು(ಡಿ) ಗ್ರಾಮ ಹಾಗೂ ಗಂಗಾವತಿ ತಾಲ್ಲೂಕು ನ್ಯಾಯಾಲಯದ ಸಂಕೀರ್ಣದ ಎದುರಿರುವ ಡಾ.ಅಂಬೇಡ್ಕರ್ ಪುತ್ಥಳಿಗೆ ಅವಮಾನ ಮಾಡಿರುವ ಘಟನೆ ಖಂಡಿಸಿ ಕರ್ನಾಟಕ ದಸಂಸ(ಭೀಮವಾದ) ಜಿಲ್ಲಾ ಸಂಘಟನೆ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಿಂದ ವಾಲ್ಮೀಕಿ ವೃತ್ತದವರೆಗೆ ಪ್ರತಿಭಟನೆ ನಡೆಸಲಾಯಿತು. ಬಳಿಕ ತಹಶೀಲ್ದಾರ್ ವಿಶ್ವನಾಥ ಮುರುಡಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆ ಜಿಲ್ಲಾಧ್ಯಕ್ಷ ಸಿ.ಕೆ. ಮರಿಸ್ವಾಮಿ ಮಾತನಾಡಿ, ‘ಮನುವಾದಿ ಗುಲಾಮ ಮನಸ್ಥಿತಿ ಹೊಂದಿರುವ ದುಷ್ಕರ್ಮಿಗಳು ರಾಷ್ಟ್ರ ನಾಯಕ ಅಂಬೇಡ್ಕರ್ ಪುತ್ಥಳಿಗೆ ಅವಮಾನ ಮಾಡಿರುವುದು ಖಂಡನೀಯ. ದೇಶದ್ರೋಹಿ ಕೆಲಸ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಪ್ರಚೋದನಕಾರಿ ಭಾಷಣಗಳ ಮೂಲಕ ಸಮಾಜದಲ್ಲಿ ಕೋಮುಗಲಭೆ ಸೃಷ್ಟಿಸುತ್ತಿರುವ ಕಲ್ಲಡ್ಕ ಫ್ರಭಾಕರ ಭಟ್ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಮಟ್ಕಾ, ಇಸ್ಪೀಟ್, ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಕಿರಾಣಿ ಅಂಗಡಿಗಳಲ್ಲೂ ಸಾರಾಯಿ ಸಿಗುತ್ತಿದೆ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಗಂಗಾವತಿ-ಲಿಂಗಸೂರು ರಸ್ತೆಯ ವಾಲ್ಮೀಕಿ ವೃತ್ತದ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡಿದರು. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಘೋಷಣೆ ಕೂಗಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಯಲ್ಲಪ್ಪ ಹಳೇಮನಿ, ಸಂಘಟನೆ ವಿವಿಧ ತಾಲ್ಲೂಕು ಅಧ್ಯಕ್ಷ ಹನುಮೇಶ, ಯಲ್ಲಪ್ಪ, ರವಿಚಂದ್ರ ಗುಡ್ಲನೂರು, ಪದಾಧಿಕಾರಿಗಳಾದ ಸುಹಿಲ್, ಹುಲ್ಲೇಶ ಭೋವಿ, ದುರಗೇಶ ಭಾಗವಹಿಸಿದ್ದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷಯ್ಯ, ತಾ.ಪಂ ಯೋಜನಾಧಿಕಾರಿ ರಾಜಶೇಖರ ಹಾಜರಿದ್ದರು.